ಮಂಗಳೂರು: ಕಳೆದ ವಿಧಾನಸಭಾ ಕ್ಷೇತ್ರಗಳ 72 ಮತಗಟ್ಟೆಗಳಲ್ಲಿ ಕಡಿಮೆ ಮತದಾನ ದಾಖಲಾಗಿದ್ದು, ಈ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯ ಅಂಗವಾಗಿ ಈ ಮತಗಟ್ಟೆಗಳ ವ್ಯಾಪ್ತಿಯ ಎಲ್ಲ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಹೇಳಿದರು.
ಅವರು ಅಧಿಕಾರಿಗಳ ಸಭೆ ನಡೆಸಿ ಬುಧವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ್ದು, ‘ ಏ.21ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಮ್ಮ ನಡೆ ಮತಗಟ್ಟೆಗಳ ಕಡೆಗೆ ಕಾರ್ಯಕ್ರಮ ನಡೆಸಿ, ಎಲ್ಲ ಬೂತ್ಗಳಲ್ಲಿ ಚುನಾವಣಾ ಧ್ವಜ ಹಾರಿಸಿ, ಅರಿವು ಮೂಡಿಸಲಾಗುವುದು. ಈ ಧ್ವಜದಲ್ಲಿ ಚುನಾವಣೆಯ ದಿನಾಂಕ ಮತ್ತು ಸಮಯ ನಮೂದಿಸಲಾಗುತ್ತದೆ. ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳ ವ್ಯಾಪ್ತಿಯ ಪ್ರತಿ ಮನೆಗೆ ನಮ್ಮ ಸಿಬ್ಬಂದಿ ತಂಡದಲ್ಲಿ ಹೋಗಿ, ಚುನಾವಣೆಯ ಮಾಹಿತಿ ಕೈಪಿಡಿ, ಮತದಾರರ ಪಟ್ಟಿಯ ಸ್ಲಿಪ್ ನೀಡುವ ಜೊತೆಗೆ ಐದು ನಿಮಿಷ ಅವರೊಂದಿಗೆ ಚರ್ಚಿಸಿ, ಮತದಾನದ ಮಹತ್ವವನ್ನು ತಿಳಿಸುತ್ತಾರೆ,’ ಎಂದರು.
ಇನ್ನು ನಗರ ಪ್ರದೇಶದ ಕೆಲವು ಮತಗಟ್ಟೆಗಳಲ್ಲಿ ಮತದಾನ ಕಡಿಮೆಯಾಗಲು ಕಾರಣ ವಲಸೆ, ವಿದೇಶದಲ್ಲಿ ಕೆಲಸ, ನಿಧನರಾಗಿದ್ದರೂ ಹೆಸರು ಕಡಿತ ಆಗದಿರುವುದಾಗಿದೆ. ಸರದಿಯಲ್ಲಿ ನಿಂತು ಮತ ಚಲಾಯಿಸಬೇಕು ಎಂಬ ಕಾರಣಕ್ಕೆ ಇನ್ನು ಕೆಲವರು ಮತದಾನದತ್ತ ನಿರಾಸಕ್ತರಾಗುತ್ತಾರೆ. ಈ ಬಾರಿ ಮತ ಕೇಂದ್ರದ ಪಕ್ಕದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುತ್ತದೆ. ಉದ್ದದ ಸರದಿ ಇದ್ದಲ್ಲಿ ಅಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು’ ಎಂದು ಹೇಳಿದರು.
ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಭಿನ್ನ ಚಟುವಟಿಕೆ ಹಮ್ಮಿಕೊಳ್ಳಲಾಗುತ್ತಿದೆ. ನಿರಂತರ ಕಾರ್ಯಕ್ರಮದಿಂದ ವಿಶೇಷವಾಗಿ ಯುವಜನರಲ್ಲಿ ಮತದಾನದ ಅರಿವು ಮೂಡಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಎಲ್, ಮಹಾನಗರ ಪಾಲಿಕೆ ಆಯುಕ್ತ ಆನಂದ್, ರಾಜ್ಯ ಮಟ್ಟದ ತರಬೇತುದಾರ್ತಿ ಪ್ರಮೀಳಾ ರಾವ್ ಉಪಸ್ಥಿತರಿದ್ದರು.