ಉಡುಪಿ: ಜಿಲ್ಲೆಯಲ್ಲಿ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡವನ್ನು ಪ್ರಧಾನವಾಗಿ ಬಳಸುವುದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ ಅನ್ವಯ ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆ ಶೇ.60ರಷ್ಟು ಜಿಲ್ಲೆಯಲ್ಲಿ ನಾಮಫಲಕದ ಮೇಲ್ಭಾಗದಲ್ಲಿ ಪ್ರದರ್ಶಿಸದೆ ಇರುವುದು ಪರಿಶೀಲನೆ ವೇಳೆ ಕಂಡುಬಂದಿರುತ್ತದೆ. ಈ ನಿಯಮವನ್ನು ಪಾಲಿಸದಿರುವ ಸಂಘ, ಸಂಸ್ಥೆ ಹಾಗೂ ಘಟಕಗಳಿಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ ಅನ್ವಯ ಮೊದಲನೇ ಅಪರಾಧಕ್ಕಾಗಿ 5 ಸಾ. ರೂ. ರವರೆಗೆ, ಎರಡನೇ ಅಪರಾಧಕ್ಕಾಗಿ ರೂ. 10ಸಾ. ರೂ. ರವರೆಗೆ, ಅನಂತರದ ಪ್ರತಿಯೊಂದು ಅಪರಾಧಕ್ಕಾಗಿ 20,000 ರೂ. ರವರೆಗೆ ದಂಡ ವಿಧಿಸಿ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.
ಸಂಘ, ಸಂಸ್ಥೆ ಹಾಗೂ ಘಟಕದ ಹೆಸರು ಮತ್ತು ವಿಳಾಸ ಕನ್ನಡದಲ್ಲಿ ಫಲಕಗಳ ಮೇಲ್ಭಾಗದಲ್ಲಿ ಶೇ.60 ರಷ್ಟು ಪ್ರದರ್ಶಿಸುವ ಮೂಲಕ ಆ. 30ರೊಳಗಾಗಿ ಪರಿಷ್ಕೃತ ಫಲಕವನ್ನು ಅಳವಡಿಸಬೇಕು. ಇದರ ಹೊರತಾಗಿ ನಂತರದ ದಿನಗಳಲ್ಲಿ ತಪಾಸಣೆಯ ಸಂದರ್ಭ ನಾಮಫಲಕದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮೇಲೆ ವಿವರಿಸಿರುವ ದಂಡನೆಗೆ ಒಳಪಡಿಸಲಾಗುವುದು ಎಂದು ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.