ಬಂಟ್ವಾಳ; ಪ್ರೇಯಸಿಯ ಭೇಟಿಗಾಗಿ ಬಂದಿದ್ದ ಯುವಕನಿಗೆ ಅಮಾನುಷವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ದಿನಾಂಕ 07.11.2024 ರಂದು ರಾತ್ರಿ 10.00 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಮಹಮ್ಮದ್ ಮುಸ್ತಾಪ(21) ನನ್ನು ಆತನ ದೂರದ ಸಂಬಂಧಿ ಹುಡುಗಿಯೊಬ್ಬಳು ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಮನೆಗೆ ಬರಲು ಹೇಳಿದ್ದಳು. ಅದರಂತೆ ಸಜೀಪನಡು ಕಂಚಿನಡ್ಕಪದವು ಎಂಬಲ್ಲಿಗೆ ಬಂದಾಗ ಆರೋಪಿಗಳು ಮಹಮ್ಮದ್ ಮುಸ್ತಾಫ್ ನ ಬಗ್ಗೆ ಸಂಶಯ ವ್ಯಕ್ತಪಡಿಸಿ ಗುಂಪು ಸೇರಿಕೊಂಡು ಮಹಮ್ಮದ್ ಮುಸ್ತಾಫ ಎಂಬಾತನನ್ನು ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ದಿನಾಂಕ 08.11.2024 ರಂದು ಮಹಮ್ಮದ್ ಮುಸ್ತಾಫ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ 99/2024 ಕಲಂ 115(2), 126(2), 189(2), 190, 191(2), 191(3),351(2),352 ಬಿಎನ್ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಬಳಿಕ ಹಲ್ಲೆಗೊಳಗಾದ ಮಹಮ್ಮದ್ ಮುಸ್ತಾಪ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದ. ಪೊಲೀಸರು ಆಸ್ಪತ್ರೆ ಮೂಲದಿಂದ ಮಾಹಿತಿ ಬಂದ ಹಿನ್ನೆಲೆ 10.11.2024 ರಂದು ಹೈಲ್ಯಾಂಡ್ ಆಸ್ಪತ್ರೆಗೆ ತೆರಳಿ ಮಹಮ್ಮದ್ ಮುಸ್ತಾಫ್ ನನ್ನು ವಿಚಾರಿಸಿದಾಗ ಆತನು ಆರೋಪಿಗಳು ತನ್ನನ್ನು ಕೊಲೆ ನಡೆಸುವ ಉದ್ದೇಶದಿಂದ ಗುಂಪು ಸೇರಿ ಕಂಬಕ್ಕೆ ಕಟ್ಟಿ ಹಾಕಿ ಗುಂಪು ಹಲ್ಲೆ ನಡೆಸಿ ಕೊಲೆಯತ್ನ ನಡೆಸಿರುವುದಾಗಿ ಹೇಳಿಕೆ ನೀಡಿರುವುದರಿಂದ ಪ್ರಕರಣದಲ್ಲಿ ಕಲಂ 109, 117(4) ಬಿಎನ್ಎಸ್ ಕಾಯ್ದೆಯನ್ನು ಹೆಚ್ಚುವರಿಯಾಗಿ ಸೇರಿಸಿ ಮಾನ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿರುತ್ತದೆ.
ಆ ಬಳಿಕ ಗುಂಪು ಹಲ್ಲೆ ಕೊಲೆಯತ್ನ ನಡೆಸಿದ ಆರೋಪಿಗಳ ಪತ್ತೆಯ ತೆರಳಿ ಗುಂಪು ಹಲ್ಲೆ ಕೊಲೆಯತ್ನ ನಡೆಸಿದ ಆರೋಪಿಗಳಾದ 1.ಮಹಮ್ಮದ್ ಸಪ್ವಾನ್ (25), 2.ಮಹಮ್ಮದ್ ರಿಜ್ವಾನ್ (25 ), 3.ಇರ್ಪಾನ್(27), 4. ಅನೀಸ್ ಅಹಮ್ಮದ್ (19) , 5.ನಾಸೀರ್ (27) , 6.ಶಾಕೀರ್ (18) ಎಂಬವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತರೆಲ್ಲರೂ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ನಿವಾಸಿಗಳಾಗಿದ್ದಾರೆ. ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.