ಉಡುಪಿ:ಇತ್ತೀಚೆಗೆ ಕೊಡಗಿನ ವಿದ್ಯಾರ್ಥಿನಿಯೊರ್ವಳು ಸಮುದ್ರ ಪಾಲಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬುಧವಾರ ಮಲ್ಪೆ ಬೀಚ್ ಸುತ್ತ ಸುರಕ್ಷತಾ ಕ್ರಮವಾಗಿ ತಡೆಬೇಲಿ ನಿರ್ಮಿಸಲಾಗಿದೆ.
ಎಚ್ಚರಿಕೆ ಮಧ್ಯೆಯೂ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಪೆ ಬೀಚ್ಗೆ ಆಗಮಿಸಿ ಸಮುದ್ರದ ನೀರಿನಲ್ಲಿ ಆಡುತ್ತಿದ್ದಾರೆ.ಈ ನಿಟ್ಟಿನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ತಡೆಯುವ ಉದ್ದೇಶದಿಂದ ಮಲ್ಪೆ ಬೀಚ್ ಅಭಿವೃದ್ಧಿ ಪ್ರಾಧಿಕಾರ ಈ ಕ್ರಮವನ್ನು ತೆಗೆದುಕೊಂಡಿದೆ.
ಬೀಚ್ನ ಸುಮಾರು 1 ಕಿ.ಮೀ ತೀರದಲ್ಲಿ 5 ರಿಂದ 6 ಅಡಿ ಎತ್ತರದ ನೆಟ್ ಹಾಕಲಾಗಿದ್ದು, ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ. ನಿಯಮ ಉಲ್ಲಂಘಿಸಿ ಸಮುದ್ರಕ್ಕಿಳಿದರೆ ₹ 500 ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದ್ದು, ಲೈಫ್ ಗಾರ್ಡ್ ಸಿಬ್ಬಂದಿ ಕೂಡ ಮಾಹಿತಿ ನೀಡುತ್ತಿದ್ದಾರೆ. ಪ್ರವಾಸಿಗರು ನೆಟ್ನಿಂದ ಹೊರಗೆ ನಿಂತು ಸಮುದ್ರವನ್ನು ವೀಕ್ಷಿಸಬಹುದು ಆದರೆ ಸಮುದ್ರಕ್ಕಿಳಿಯಬಾರದು ಎಂದು ಮನವಿ ಮಾಡಿದ್ದಾರೆ.
ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ನಲ್ಲಿ ಪರಿಸ್ಥಿತಿ ನೋಡಿಕೊಂಡು ಬೀಚ್ಗೆ ಇಳಿಯಲು ಅನುಮತಿ ನೀಡಲಾಗುವುದು. ಅಲ್ಲಿಯವರೆಗೂ ಪ್ರವಾಸಿಗರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.