ಚಿತ್ತೂರು: ರಜಾದಿನ ಕಳೆಯಲು ಬಂದ ಮೊಮ್ಮಕ್ಕಳಿಗೆ ಚಿಕನ್ ಮಾಡುವ ಭರದಲ್ಲಿ ಅಜ್ಜಿ ಮಾಡಿದ ಎಡವಟ್ಟಿನಿಂದಾಗಿ ಇಬ್ಬರು ಮೊಮ್ಮಕ್ಕಳು ಮೃತಪಟ್ಟರೆ, ಸ್ವತಃ ಸೇವಿಸಿದ ಅಜ್ಜಿ ಜೀವನ್ಮರಣದ ನಡುವೆ ಹೋರಾಟ ನಡೆಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸಂಭವಿಸಿದೆ.
ಗುಡಿಪಾಲ ಮಂಡಲದ ಎ.ಎಲ್.ಪುರಂನಲ್ಲಿ ಚಿಕನ್ ಮಸಾಲ ಎಂದು ಚಿಕನ್ ಕರಿಗೆ ಅಜ್ಜಿ ಕ್ರಿಮಿನಾಶಕ ಹಾಕಿದ ಆಹಾರವನ್ನು ಸೇವಿಸಿದ್ದರಿಂದ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ರೋಹಿತ್ (11) ಮತ್ತು ಜೀವನ್ (8) ಎಂದು ಗುರುತಿಸಲಾಗಿದೆ. ಚಿತ್ತೂರು ಗ್ರಾಮೀಣ ಮಂಡಳಿಯ ಚೆರ್ಲೋಪಳ್ಳಿ ಗ್ರಾಮದ ರೋಹಿತ್ ಮತ್ತು ಜೀವನ ಇಬ್ಬರು ತಮ್ಮ ರಜಾದಿನಗಳನ್ನು ಎಎಲ್ ಪುರಂನಲ್ಲಿರುವ ತಮ್ಮ ಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದರು.
ಸೋಮವಾರ ಅಜ್ಜಿ ಗೋವಿಂದಮ್ಮ (70) ಚಿಕನ್ ಕರಿ ಮಾಡಿದ್ದಾರೆ. ಆದರೆ ಗೋವಿಂದಮ್ಮ ಚಿಕನ್ ಮಸಾಲ ಎಂದು ಕೊಂಡು ಕೀಟನಾಶಕಗಳನ್ನು ಚಿಕನ್ ಕರಿಗೆ ಬೆರೆಸಿ ಅಡುಗೆ ಮಾಡಿದ್ದರು. ಇದರ ಅರಿವೇ ಇಲ್ಲದೆ ಗೋವಿಂದಮ್ಮ ಪ್ರೀತಿಯಿಂದ ತಾನು ಮಾಡಿದ್ದ ಚಿಕನ್ ಕರ್ರಿಯನ್ನು ಮೊಮ್ಮಕ್ಕಳಿಗೆ ಬಡಿಸಿದ್ದಾರೆ.
ಕೀಟನಾಶಕ ಮಿಕ್ಸ್ ಮಾಡಿದ್ದ ಆಹಾರ ಸೇವಿಸಿದ ಬಳಿಕ ಮಕ್ಕಳಿಬ್ಬರು ಪ್ರಜ್ಞೆ ತಪ್ಪಿದ್ದಾರೆ. ಅಜ್ಜಿಯೂ ಕೂಡ ಅದೇ ಊಟವನ್ನು ಮಾಡಿದ್ದು, ಅವರು ಕೂಡ ಅಸ್ವಸ್ಥರಾಗಿದ್ದಾರೆ. ತಕ್ಷಣ ಅವರನ್ನು ಚಿತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ರೋಹಿತ್ ಮತ್ತು ಜೀವನ್ ಮೃತಪಟ್ಟಿದ್ದಾರೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಗ್ರಾಮಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.