ಮಂಗಳೂರು: ಇಲ್ಲಿನ ಮೂರು ಜನರ ತಂಡವೊಂದು ಪ್ರತಿಷ್ಠಿತ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಜನರನ್ನ ನಂಬಿಸಿ 2.66 ಲಕ್ಷ ರೂ. ವಂಚನೆ ಮಾಡಿರುವ ಕುರಿತಂತೆ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಅವಿನಾಶ್ ಶೆಟ್ಟಿ, ನಮ್ರತಾ, ಅಕ್ಷತಾ ಹಾಗೂ ಗೌತಮ್ ಶೆಟ್ಟಿ ಎಂದು ತಿಳಿಸಿದ್ದಾರೆ.
ಪ್ರಕರಣದ ವಿವರ: ನಮೃತಾ ಎನ್ನುವಾಕೆ ದೂರುದಾರರಿಗೆ ಪರಿಚಯವಾಗಿದ್ದು, ಆಕೆ ತಾನು ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೌಕರಿ ನೇಮಕಾತಿ ಮಾಡುತ್ತಿದ್ದೇನೆ ಎಂದು ದೂರುದಾರರಿಗೆ ನಂಬಿಸಿದ್ದರು. ಹಾಗೆಯೇ ತನ್ನ ಪರಿಚಯದಾತ ಟೆಂಡರುದಾರ ಅವಿನಾಶ್ ಶೆಟ್ಟಿಗೆ 2.50 ಲಕ್ಷ ರೂ. ನೀಡಿದರೆ ಉದ್ಯೋಗ ದೊರೆಯುತ್ತದೆ ಎಂದು ಹೇಳಿದ್ದಾಳೆ. ಅದರಂತೆ ದೂರುದಾರರು ಅವಿನಾಶ್ ಶೆಟ್ಟಿ ಅವರಿಗೆ ಕರೆ ಮಾಡಿದ್ದು, ಆತ ಸೂಚನೆಯಂತೆ ದೂರುದಾರರ ಭಾವ ಮಂಗಳೂರು ಲಾಲ್ಬಾಗ್ ಪಾಲಿಕೆ ಕಚೇರಿ ಹಿಂಭಾಗದಲ್ಲಿ ಆತನನ್ನು ಭೇಟಿಯಾಗಿದ್ದಾರೆ. ಅವರ ಮಗಳಿಗೆ ಉದ್ಯೊಗದ ಬಗ್ಗೆ ಮಾತನಾಡಿ ಬಯೋ-ಡಾಟಾ ಪಡೆದು, 2.50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಇನ್ನು ಅದರಂತೆ ಅವರು 2.50 ಲಕ್ಷ ರೂ. ಮೊತ್ತದ ಚೆಕ್ಕನ್ನು ನಮ್ರತಾಳಿಗೆ ನೀಡಿದ್ದಾರೆ. ಬಳಿಕ ಆತನನ್ನು ವಿಚಾರಿಸಿದಾಗ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಅವಿನಾಶ್ ಶೆಟ್ಟಿಯು ಈಗಾಗಲೇ ಹಲವು ಜನರಿಗೆ ಉದ್ಯೋಗ ವಂಚನೆ ಮಾಡಿದ್ದು, ಈತನನ್ನ ಜ. 5ರಂದು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಣ ಪಡೆದು ಉದ್ಯೋಗ ನೀಡದಿರುವ ಎಲ್ಲ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರಗಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.