ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ವಿಶೇಷ ಅಭಿಯಾನ ನಡೆಸಿ, ಒಟ್ಟು 160 ವಾಹನಗಳ ಕರ್ಕಶ ಹಾರ್ನ್ಗಳನ್ನು ತೆರವುಗೊಳಿಸಿದರು.
ಅಭಿಯಾನದ ಕುರಿತಂತೆ ಮಾತನಾಡಿದ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ‘ಅನಾರೋಗ್ಯ ಪೀಡಿತರು, ವಯಸ್ಸಾದವರು ವಾಹನಗಳ ಕರ್ಕಶ ಹಾರ್ನ್ ನಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಈ ಬಗ್ಗೆ ನಮಗೆ ಪದೇ ಪದೇ ದೂರುಗಳು ಬಂದಿದ್ದವು. ವಾಹನ ಚಾಲಕರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಅವರು ಕರ್ಕಶ ಹಾರ್ನ್ ಬಳಕೆ ನಿಲ್ಲಿಸಿರಲಿಲ್ಲ. ಹಾಗಾಗಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಾಲ್ಕು ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ವಿಶೇಷ ಅಭಿಯಾನ ನಡೆಸಿ ಇಂತಹ ಹಾರ್ನ್ಗಳನ್ನು ಕಿತ್ತು ಹಾಕಿದ್ದೇವೆ’ ಎಂದು ತಿಳಿಸಿದರು.
ಇನ್ನು ಕರ್ಕಶ ಹಾರ್ನ್ ಕಿತ್ತುಹಾಕುವುದರ ಜೊತೆಗೆ, ಅದನ್ನು ಬಳಸಿದ ವಾಹನಗಳಿಗೆ ತಲಾ ₹ 500 ದಂಡ ವಿಧಿಸಿದ್ದೇವೆ. ಅವರು ಈ ಚಾಳಿ ಮುಂದುವರಿಸಿದರೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.