ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿ ನಗರದಲ್ಲಿ ಹಾಸ್ಟೆಲ್ ಸಿಗದ ಕಾರಣದಿಂದಾಗಿ ಪ್ರತಿನಿತ್ಯ ಹಳ್ಳಿಯಿಂದ ನಗರಕ್ಕೆ 160 ಕಿ.ಮೀ.ಗೂ ಅಧಿಕ ದೂರ ಕ್ರಮಿಸುತ್ತಾರೆ.
ಕಡಬದಲ್ಲಿ ಎಸೆಸೆಲ್ಸಿ ಮುಗಿಸಿರುವ ವಿದ್ಯಾರ್ಥಿನಿಯು ಬಲ್ಮಠದ ಸರಕಾರಿ ಕಾಲೇಜೊಂದರ ಕಲಾವಿಭಾಗಕ್ಕೆ ಸೇರಿಕೊಂಡಿದ್ದು, ಈಕೆ ಹಾಗೂ ಈಕೆಯ ತಾಯಿ ಕಡಬದಿಂದ ಪ್ರತೀದಿನ ಬೆಳಗ್ಗೆ 6 ಗಂಟೆಯ ಬಸ್ ಏರಿ ಮಂಗಳೂರಿಗೆ ಬರುತ್ತಾರೆ. ತಾಯಿ ಮಗಳನ್ನು ಕಾಲೇಜಿಗೆ ಬಿಟ್ಟು ನಂತರದಲ್ಲಿ ತಾಯಿ ನಗರದ ವೆನ್ಲಾಕ್ ಆಸ್ಪತ್ರೆ ಪರಿಸರದಲ್ಲಿ ಉಳಿದುಕೊಳ್ಳುತ್ತಾರೆ. ಅಪರಾಹ್ನ 2.30ರ ಸುಮಾರಿಗೆ ಮಗಳ ಕಾಲೇಜಿನ ಬಳಿಯಿರುವ ಬಸ್ ನಿಲ್ದಾಣಕ್ಕೆ ಬರುತ್ತಾರೆ. 3.40ಕ್ಕೆ ತರಗತಿ ಮುಗಿಯುತ್ತದೆ. 4 ಗಂಟೆಯ ಬಳಿಕ ಬಸ್ಸಿನಲ್ಲಿ ಮನೆಗೆ ಪ್ರಯಾಣ!
ಬಲ್ಮಠದ ಸರಕಾರಿ ಕಾಲೇಜಿನಲ್ಲಿ ಪಿಯುಸಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಕೆಲವು ಪೂರಕ ತರಬೇತಿಗಳನ್ನೂ ನೀಡುತ್ತಾರೆ, ಕ್ಯಾಂಪಸ್ ಆಯ್ಕೆಯೂ ಇದೆ ಎನ್ನುವ ಕಾರಣಕ್ಕೆ ಇಲ್ಲಿಗೆ ದೂರದೂರುಗಳಿಂದ ವಿದ್ಯಾರ್ಥಿನಿಯರು ಬರುತ್ತಿದ್ದಾರೆ.
ಇನ್ನು ಕಡಬದ ವಿದ್ಯಾರ್ಥಿನಿ ಹಾಗೂ ಆಕೆತ ತಾಯಿ ಹಾಸ್ಟೆಲ್ಗಾಗಿ ನಡೆಸಿದ ಪ್ರಯತ್ನ ಫಲ ಕೊಟ್ಟಿಲ್ಲ. ಹಾಸ್ಟೆಲ್ ಸಿಗುವ ವರೆಗೆ ಪ್ರತಿದಿನ ಬಂದು ಹೋಗಲು ನಿರ್ಧರಿಸಿದ್ದಾರೆ. ವಿದ್ಯಾರ್ಥಿನಿಯ ತಾಯಿ ಬೀಡಿ ಕಟ್ಟುತ್ತಿದ್ದು, ಶಸ್ತ್ರಚಿಕಿತ್ಸೆ ಕೂಡ ಆಗಿರುತ್ತದೆ. ಆದರೆ ಮಗಳ ಆಸೆಯಂತೆ ಮಂಗಳೂರಿನ ಕಾಲೇಜಿಗೆ ಸೇರಿಸಿದ್ದು, ಪ್ರತಿ ದಿನ ಬಂದು ಹೋಗುವ ಕಾರಣದಿಂದ ಬೀಡಿ ಕಟ್ಟಲು ಸಮಯ ಸಿಗುವುದಿಲ್ಲ. ಪತಿ ಕೂಲಿ ಕೆಲಸ ಮಾಡುತ್ತಾರೆ. ಮಗಳು ಒಬ್ಬಳೇ ಬಂದು ಹೋಗುತ್ತೇನೆ ಎಂದರು ನನ್ನ ಮನಸ್ಸು ಒಪ್ಪಿಕೊಳ್ಳುವುದಿಲ್ಲ ಎನ್ನುತ್ತಾರೆ. ಆಕೆಯ ತರಗತಿ ಮುಗಿಯುವ ವರೆಗೆ ಆಸ್ಪತ್ರೆಯ ಆವರಣದಲ್ಲಿ ಸಮಯ ಕಳೆಯುತ್ತೇನೆ. ಹಾಸ್ಟೆಲ್ನಲ್ಲಿ ವಿಚಾರಿಸಿದರೆ ಈಗ ಸೇರಿಸುವುದಿಲ್ಲ. ಸರ್ವರ್ ಸಮಸ್ಯೆ ಇದೆ. ದಾಖಲಾತಿ ಆರಂಭವಾಗಿಲ್ಲ ಎಂದಿದ್ದಾರೆ.
ಇನ್ನು ಈ ಕುರಿತಂತೆ ಪ್ರತಿಕ್ರಯಿಸಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಿ ಪಾರ್ವತಿ, ಸರ್ವರ್ ಸಮಸ್ಯೆಯೇ ಮೂಲ ತೊಡಕಾಗಿದ್ದು, ಇದಕ್ಕೆ ಶೀಘ್ರವೇ ಪರಿಹಾರ ಕಂಡುಕೊಳ್ಳಲಾಗುತ್ತದೆ. ಈ ಕುರಿತಂತೆ ಸೋಮವಾರದಂದು ಸಭೆ ನಡೆಸಲಾಗಿದೆ,’ ಎಂದಿದ್ದಾರೆ.