ಮಂಗಳೂರು: 11 ವರ್ಷದ ಬಾಲಕಿ ಮಂಗಳೂರಿನ ಡಿಲ್ನಾ ರಾಜೇಶ್ ಕ್ಯಾನ್ಸರ್ ರೋಗಿಗಳಿಗೆ ಕೇಶ ದಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಆರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಡಿಲ್ನಾ ಕ್ಯಾನ್ಸರ್ ನಿಂದ ಮುಕ್ತಿ ಪಡೆಯಲು ಕಿಮೋಥೆರಪಿ ಮಾಡಿಸಿಕೊಂಡಾಗ ಇಡೀ ಕೇಶ ರಾಶಿಯೇ ಉದುರಿ ಹೋಗುತ್ತದೆ ಎಂಬುದನ್ನು ಅರಿತ ಈಕೆ, ಕೂದಲು ಕಳೆದುಕೊಂಡ ಜನರಿಗೆ ವಿಗ್ ತಯಾರಿಸಲು ತಮ್ಮ ಕೇಶವನ್ನು ದಾನ ಮಾಡಿದ್ದಾಳೆ.
ಡಿಲ್ನಾ ತನ್ನ 9ನೇ ವರ್ಷದಲ್ಲಿ ತನ್ನ ಕೂದಲನ್ನು ದಾನ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಕೂದಲನ್ನು ಕತ್ತರಿಸದೆ ಹಾಗೆ ಬಿಡಲಾಗಿತ್ತು. ಜನವರಿ 14 ರಂದು ತನ್ನ 11ನೇ ಹುಟ್ಟುಹಬ್ಬದಂದು ಕೂದಲು ನೀಡಲು ನಿರ್ಧರಿಸಿದಾಗ ಲಾಕ್ ಡೌನ್ ಶುರುವಾಯ್ತು . ಹೀಗಾಗಿ ಸೆಪ್ಟಂಬರ್ 22ರಂದು ತನ್ನ ಕೇಶವನ್ನು ಕೊಡುಗೆ ನೀಡಲಾಗಿದೆ ಎಂದು ಡಿಲ್ನಾ ಹೆತ್ತವರು ತಿಳಿಸಿದ್ದಾರೆ.
ಈ ಕತ್ತರಿಸಿದ ಕೇಶವನ್ನು ಕೇರಳ ತ್ರಿಶೂರಿನ ಮಿರಾಕಲ್ ಚಾರಿಟೇಬಲ್ ಅಸೋಸಿಯೇಶನ್ ನೇತೃತ್ವದ ಹೇರ್ ಬ್ಯಾಂಕ್ಗೆ ಕಳುಹಿಸಿಕೊಡಲಾಗಿದ್ದು, ಇದು ಬಡ ಕ್ಯಾನ್ಸರ್ ರೋಗಿಗಳಿಗಾಗಿ ವಿಗ್ಗಳನ್ನು ತಯಾರಿಸಿ ಕೊಡುವ ಸಂಸ್ಥೆಯಾಗಿದೆ.
ರೈಲು ಪ್ರಯಾಣದ ಸಮಯದಲ್ಲಿ, ತಿರುವನಂತಪುರಂ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದಲ್ಲಿ ಚಿಕಿತ್ಸೆಯಲ್ಲಿರುವ ಕೂದಲು ಉದುರುವ ಕ್ಯಾನ್ಸರ್ ರೋಗಿಗಳನ್ನು ನೋಡಿದ ಮೇಲೆ ಮನಸ್ಸಿನಲ್ಲಿ ಉಂಟಾದ ನಿರ್ಧಾರದಂತೆ ಕೇಶವನ್ನು ದಾನ ಮಾಡಲಾಯಿತು. ಹೊಸ ಕೂದಲು ಬೆಳೆದಾಗ ವಾಪಸ್ ನೀಡುವುದಾಗಿ ದಿಲ್ನಾ ಹೇಳುತ್ತಾಳೆ.
ಡಿಲ್ನಾ ಮಂಗಳೂರಿನ ಮಲಯಾಳ ಮನೋರಮಾ ಪತ್ರಿಕೆಯ ವರದಿಗಾರ ರಾಜೇಶ್ ಕುಮಾರ್ ಕಾಂಕೋಲ್ ಮತ್ತು ಯೆನೆಪೊಯ ಪಿಯು ಕಾಲೇಜಿನ ಉಪನ್ಯಾಸಕಿ ಕೆ.ಎಂ.ಜಮುನಾ ದಂಪತಿಯ ಪುತ್ರಿ. ಇವರು ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯ ಕಾಂಕೋಲ್ ನಿವಾಸಿಗಳಾಗಿದ್ದು, ಪ್ರಸಕ್ತ ಮಂಗಳೂರಿನ ಎಕ್ಕೂರಿನಲ್ಲಿ ನೆಲೆಸಿದ್ದಾರೆ.