ಹೈದರಾಬಾದ್ : ಇತ್ತೀಚೆಗೆ ಹೈದರಾಬಾದ್ನ ಮುಶೀರಾಬಾದ್ನಲ್ಲಿ ಆಟೊಮೊಬೈಲ್ ಶೋರೂಂ ಒಂದು ಬೆಂಕಿಗೆ ಅಹುತಿಯಾಗಿತ್ತು. ಅಗ್ನಿ ಅನಾಹುತದಲ್ಲಿ ಸುಮಾರು 1 ಕೋಟಿ ರೂ ನಷ್ಟ ಸಂಭವಿಸಿತ್ತು. ಈ ಘಟನೆ ನಡೆದಿದ್ದು ಫೆ. 8ರಂದು. ಘಟನೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿದ್ದ ವಿಧಿ ವಿಜ್ಞಾನ ತಜ್ಞರು ಸಾಕಷ್ಟ ಪ್ರಯತ್ನ ನಡೆಸಿದರೂ ಬೆಂಕಿ ಅವಘಡಕ್ಕೆ ಕಾರಣ ಗೊತ್ತಾಗಿರಲಿಲ್ಲ.
ಇಡೀ ಕಟ್ಟಡವನ್ನು ಪರಿಶೀಲಿಸಿದ್ದ ಪರಿಣತರು ಸುಟ್ಟು ಹೋದ ವಸ್ತುಗಳು, ವೈರಿಂಗ್ ಮುಂತಾದವುಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದರು. ಆರಂಭದಲ್ಲಿ ಇದು ಶಾರ್ಟ್ ಸರ್ಕ್ಯೂಟ್ ಎಂದು ಭಾವಿಸಿದ್ದರೂ ಶಾರ್ಟ್ ಸರ್ಕ್ಯೂಟ್ ಉಂಟಾಗಲು ಸಾಧ್ಯವೇ ಇಲ್ಲ ಜತೆಗೆ ಉರಿಯುವಂತಹ ವಸ್ತುಗಳೂ ಅಲ್ಲಿರಲಿಲ್ಲ ಎನ್ನುವುದು ಗೊತ್ತಾಗಿತ್ತು.
ಬಳಿಕ ಆ ತಂಡವು ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಘಟನೆಗೆ ಕಾರಣ ಬಹಿರಂಗವಾಗಿತ್ತು. ಇದು ವಿಚಿತ್ರವೆನಿಸಿದರೂ ಪರಿಣತರ ತಂಡ ನಂಬಲೇಬೇಕಾಗಿತ್ತು. ಏಕೆಂದರೆ ಬೆಂಕಿಗೆ ಕಾರಣವಾಗಿದ್ದು ಎಂದು ಇಲಿ.
ಕಟ್ಟಡದ ಮೊದಲ ಮಹಡಿಯ ಪೂರ್ವ ಭಾಗದಲ್ಲಿ ಇಲಿ ಮಾಡಿದ ಕಿತಾಪತಿ ಕಟ್ಟಡದ ಒಂದು ಭಾಗ ಸುಟ್ಟು ಹೋಗಲು ಕಾರಣವಾಗಿದ್ದರೆ, ಆವರಣದಲ್ಲಿದ್ದ ಮೂರು ವಾಹನಗಳು ಕೂಡ ಹಾನಿಯಾಗುವಂತೆ ಮಾಡಿತ್ತು. ಮಧ್ಯರಾತ್ರಿ ವೇಳೆಗೆ ಗ್ರಾಹಕ ಸೇವೆಯ ಕೊಠಡಿ ಪ್ರವೇಶಿಸಿದ್ದ ಇಲಿ, ಉರಿಯುವ ವಸ್ತುವೊಂದನ್ನು ಕಚ್ಚಿ ತಂದಿತ್ತು. ಅದನ್ನು ಕುರ್ಚಿಯ ಮೇಲೆ ಹಾಕಿತ್ತು. ಕೆಲ ಕ್ಷಣದಲ್ಲಿಯೇ ಕುರ್ಚಿ ಹೊತ್ತಿ ಉರಿಯಲು ಶುರುವಾಯಿತು. ಅದರಿಂದ ಪಕ್ಕದಲ್ಲಿದ್ದ ಪೀಠೋಪಕರಣಗಳಿಗೆ ದಾಟುತ್ತಾ ಬೆಂಕಿ ಜೋರಾಗಿತ್ತು.
ಪ್ರತಿ ಶುಕ್ರವಾರವೂ ಅಲ್ಲಿನ ಉದ್ಯೋಗಿಗಳು ಆ ಕೊಠಡಿಯಲ್ಲಿ ಪೂಜೆ ಮಾಡುತ್ತಿದ್ದು, ಒಂದು ಮೂಲೆಯಲ್ಲಿ ದೀಪಹಚ್ಚಿಟ್ಟಿದ್ದರು. ರೂಮಿನಲ್ಲಿ ಜೋರಾಗಿ ಗಾಳಿ ಬೀಸದ ಕಾರಣ ದೀಪ ಆರಿರಲಿಲ್ಲ. ರಾತ್ರಿ ಉರಿಯುತ್ತಿದ್ದ ಬತ್ತಿಯನ್ನು ಕಚ್ಚಿಕೊಂಡು ಬಂದ ಇಲಿ ಅದನ್ನು ಬಟ್ಟೆಯ ಕುರ್ಚಿಯ ಮೇಲೆ ಹಾಕಿತ್ತು. ಅದು ಇಡೀ ಅನಾಹುತಕ್ಕೆ ಕಾರಣವಾಗಿತ್ತು.