ಪುತ್ತೂರು; ತೋಟಕ್ಕೆ ನೀರು ಬಿಡಲು ಹೋದ ಕೃಷಿಕರೊಬ್ಬರ ಮೇಲೆ ಕಾಡುಹಂದಿ ದಾಳಿ ಮಾಡಿರುವ ಘಟನೆ ಕಡಬ ತಾಲೂಕಿನ ಸವಣೂರಿನ ಅಗರಿ ಎಂಬಲ್ಲಿ ನಡೆದಿದೆ. ರತ್ನಾಕರ ಪೂಜಾರಿ ಗಂಭೀರವಾಗಿ ಗಾಯಗೊಂಡ ಕೃಷಿಕ.
ಕಾಡು ಹಂದಿ ರತ್ನಾಕರ ಪೂಜಾರಿಯವರ ಕೈ ಮತ್ತು ಕಾಲನ್ನು ಜಗಿದು ಗಾಯ ಮಾಡಿದ್ದು, ಹಂದಿಯ ದಾಳಿಯನ್ನು ಕಂಡು ರತ್ನಾಕರ ಪೂಜಾರಿಯವರ ದನಗಳು ಬೊಬ್ಬೆ ಹೊಡೆದ ಬಳಿಕ ಹಂದಿ ಹೆದರಿ ಓಡಿ ಹೋಗಿದೆ.
ಇದೀಗ ಈ ಘಟನೆಗೆ ಪೊಲೀಸ್ ಇಲಾಖೆಯ ನೇರ ಕಾರಣ ಎಂದು ರೈತ ಸಂಘ ಆರೋಪಿಸಿದ್ದು, ಚುನಾವಣೆ ಹಿನ್ನಲೆ ಜಿಲ್ಲಾಡಳಿತ ರೈತರ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ಇಡುವಂತೆ ಒತ್ತಾಯಿಸಿ ಎಲ್ಲಾ ಕೋವಿಗಳನ್ನು ಠಾಣೆಯಲ್ಲಿಟ್ಟುಕೊಂಡಿದೆ. ಹೀಗಾಗಿ ಕಾಡುಹಂದಿ ದಾಳಿಗೆ ತುತ್ತಾಗಿರುವ ರತ್ನಾಕರ ಪೂಜಾರಿ ಅವರು ಕೂಡ ತಮ್ಮ ಬಳಿ ಇದ್ದ ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದಾರೆ. ಇದರಿಂದಾಗಿ ಈ ಘಟನೆ ನಡೆದಿದ್ದು, ಕೋವಿ ಕೃಷಿಕನ ಬಳಿ ಇರುತ್ತಿದ್ದರೆ ಈ ರೀತಿಯ ಅವಘಡ ನಡೆಯುತ್ತಿರಲಿಲ್ಲ . ಈ ಘಟನೆ ನಡೆದ ತಕ್ಷಣ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಕೋವಿ ಠೇವಣಿ ಇಟ್ಟ ಪರಿಣಾಮ ಹಂದಿ ದಾಳಿಯಾಗಿದೆ ಎಂದಿದ್ದಾರೆ.