ಕಡಬ ತಾಲೂಕು ನೂಜಿ ಬಾಳ್ತಿಲ ಗ್ರಾಮದ ಕಲೆಂಜಾಲು ಎಂಬಲ್ಲಿ ಮನೆಯಲ್ಲಿ ಕಾಡುಪ್ರಾಣಿಯ ಮಾಂಸ ಪತ್ತೆಯಾದ ಪ್ರಕರಣಕ್ಕೆ ಆರೋಪಿಗೆ ಜಾಮೀನು ಮಂಜೂರಾಗಿದೆ.
ಏಪ್ರಿಲ್ 20ರಂದು ಕಡಬ ತಾಲೂಕು ನೂಜಿ ಬಾಳ್ತಿಲ ಗ್ರಾಮದ ಕಲೆಂಜಾಲು ಎಂಬಲ್ಲಿರುವ ವರ್ಗಿಸ್ ಥಾಮಸ್ ಎಂಬವರ ಮನೆಯಲ್ಲಿ, ಕಾಡುಪ್ರಾಣಿಯ ಮಾಂಸದ ತುಂಡುಗಳನ್ನು ದಾಸ್ತಾನಿಟ್ಟಿರುವ ಕುರಿತು ಬಂದ ಮಾಹಿತಿ ಆಧರಿಸಿ, ಪಂಜ ವಲಯ ಅರಣ್ಯಾಧಿಕಾರಿಗಳು ಆರೋಪಿ ಮನೆಗೆ ದಾಳಿ ನಡೆಸಿದಾಗ, ಮನೆಯ ರೆಫ್ರಿಜರೇಟರ್ ಒಳಗಡೆ ಹಸಿ ಮಾಂಸ ಪತ್ತೆಯಾಗಿತ್ತು.
ಆರೋಪಿ ಪರಾರಿಯಾಗಿದ್ದು, ಕೃತ್ಯಕ್ಕೆ ಉಪಯೋಗಿಸಿದ್ದೆನ್ನಲಾದ ಕೋವಿ, ವಾಹನವನ್ನು ಮತ್ತು ಹಸಿ ಮಾಂಸವನ್ನು ವಶಕ್ಕೆ ಪಡೆದುಕೊಂಡು, ಆರೋಪಿ ವರ್ಗೀಸ್ ಥಾಮಸ್ ವಿರುದ್ಧ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರನ್ವಯ ಮೊಕದ್ದಮೆ ದಾಖಲಿಸಿ, ಪುತ್ತೂರು ನ್ಯಾಯಾಲಯಕ್ಕೆ ಅರಣ್ಯ ಅಧಿಕಾರಿಗಳು ವರದಿಯನ್ನು ನೀಡಿದ್ದರು. ನಂತರ ವನ್ಯಜೀವಿ ಬೇಟೆ ಯಾದ ಬಗ್ಗೆ ತನಿಖೆಯನ್ನು ಕೈಗೊಂಡು, ಅರಣ್ಯ ಅಧಿಕಾರಿಗಳು ಆರೋಪಿಯ ಹುಡುಕಾಟ ನಡೆಸುತ್ತಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರು ಐದನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ ರವರು, ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಆರೋಪಿ ಪರವಾಗಿ ಹಿರಿಯ ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ ಮತ್ತು ಸಾತ್ವಿಕ್ ಆರಿಗ ಬಿ ವಾದಿಸಿದ್ದರು.