ಮಂಗಳೂರು: ಮಂಗಳೂರಿನಲ್ಲಿ ಶಿಕ್ಷಣ ಮತ್ತು ಚಿಕಿತ್ಸೆಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜು ಆಡಳಿತವು ಜನಸಾಮಾನ್ಯರ ಅಮೂಲ್ಯವಾದ ಜೀವ ದೊಂದಿಗೆ ಚೆಲ್ಲಾಟ ವಾಡುತ್ತಿದೆ ಎಂದು ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.
ದೇಶದಲ್ಲೇ ಶಿಕ್ಷಣ ಕಾಶಿ ಮತ್ತು ಮೆಡಿಕಲ್ ಹಬ್ ಎಂಬ ಹೆಸರಿನಿಂದ ಕರೆಯಲ್ಪಡುವ ಮಂಗಳೂರನ್ನು ನೆರೆಯ ರಾಜ್ಯ ಮತ್ತು ಜಿಲ್ಲೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ವಿಧ್ಯಾರ್ಥಿಗಳು ಸೇರಿದಂತೆ ಚಿಕಿತ್ಸೆಗೆ ಮಂಗಳೂರನ್ನು ಆಶ್ರಯಿಸುವವರ ಸಂಖ್ಯೆ ಬಹಳ ದೊಡ್ಡದಿದೆ. ಇದನ್ನೆ ಬಂಡವಾಳ ವಾಗಿಸಿದ ಇಲ್ಲಿನ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜು ಆಡಳಿತ ಚಿಕಿತ್ಸೆಯ ಹೆಸರಿನಲ್ಲಿ ದುಬಾರಿ ಹಣ ವಸೂಲಿ ಮಾಡುವುದು ಸೇರಿದಂತೆ ಸಮರ್ಪಕ ಚಿಕಿತ್ಸೆ ಮಾಡದೆ ಜನ ಸಾಮಾನ್ಯರ ಅಮೂಲ್ಯ ಜೀವದೊಂದಿಗೆ ಚೆಲ್ಲಾಟ ಮಾಡುತ್ತಿರುವ ಮಂಗಳೂರಿನ ಮೆಡಿಕಲ್ ಮಾಫಿಯಾದ ಕರಾಳ ಮುಖವನ್ನು ನಿರಂತರವಾಗಿ ಅನಾವರಣ ಗೊಳಿಸುತ್ತಿದೆ ಆದರೂ ಸರಕಾರಗಳು ಮೌನವಾಗಿ ಕುಳಿತಿರುವುದು ಯಾಕೆ ಎಂದು ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.
ದೇಶದ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಆರೋಗ್ಯ ಮತ್ತು ಶಿಕ್ಷಣ ಖಾಸಗೀಕರಣ ಗೊಳಿಸಬಾರದು, ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದೆ ಆದರೆ ಇಂದು ಬಂಡವಾಳ ಶಾಹಿಗಳಿಗೆ, ಲಿಕ್ಕರ್ ಉದ್ಯಮಿಗಳಿಗೆ ಮತ್ತು ಶ್ರೀಮಂತರಿಗೆ,ಹಲವು ಉನ್ನತ ಮಟ್ಟದ ರಾಜಕಾರಣಿಗಳಿಗೆ ಬೆನಾಮಿ ಹೆಸರಿನಲ್ಲಿ ವ್ಯವಹಾರ ನಡೆಸಲು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವು ದೊಡ್ಡ ಲಾಭದಾಯಕ ಉದ್ಯಮವಾಗಿ ಬದಲಾಗಿವೆ. ಮಂಗಳೂರಿನಲ್ಲಿ ಇರುವ ಎಲ್ಲಾ ಮೆಡಿಕಲ್ ಕಾಲೇಜು ಮತ್ತು ಖಾಸಗಿ ಆಸ್ಪತ್ರೆಗಳು ಇದರಿಂದ ಹೊರತಾಗಿಲ್ಲ. ಕಾಲೇಜುಗಳಲ್ಲಿ ಸೀಟು ಪಡೆಯಲು ಕೋಟಿಗಟ್ಟಲೆ ಡೊನೇಶನ್ ನೀಡಿ ಸೀಟು ಪಡೆಯುವ ವಿಧ್ಯಾರ್ಥಿಗಳು ನಂತರ ವೈದ್ಯರಾಗಿ ಬಂದು ಅದಕ್ಕಿಂತ ನೂರಾರು ಪಟ್ಟು ದುಡ್ಡು ಸಂಪಾದಿಸಲು ನೋಡುತ್ತಾರೆ. ರೋಗಿಯು ಆಸ್ಪತ್ರೆಗೆ ದಾಖಲಾಗುವಾಗ ಆರಂಭವಾಗುವ ಆಸ್ಪತ್ರೆಗಳ ಬಿಲ್ ಕೊನೆಗೆ ಜೀವಂತವಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದರೆ ಅದು ಲಕ್ಷಾಂತರ ರುಪಾಯಿಗಳ ಲೆಕ್ಕದಲ್ಲಿ ಇರುತ್ತದೆ. ಕೆಲವೊಂದು ಆಸ್ಪತ್ರೆಗಳು ರೋಗಿ ಮರಣ ಹೊಂದಿದರೆ ಶರೀರದಲ್ಲಿ ಉಸಿರಾಟ ಇದೆ ಎಂದು ಸಂಬಂದಿಕರನ್ನು ನಂಬಿಸಿ ವೆಂಟಿಲೇಟರ್ ನಲ್ಲಿ ಶವ ಇಟ್ಟು ಗಂಟೆಗಳ ಲೆಕ್ಕದಲ್ಲಿ ಬಿಲ್ ಪಾವತಿಸಿ ಕೊಳ್ಳುತ್ತಿರುವುದು ನಡೆಯುತ್ತಿದೆ.
ಇಂತಹ ಮೆಡಿಕಲ್ ಮಾಫಿಯಾದಿಂದ ಮಂಗಳೂರಿನ ಜನರನ್ನು ರಕ್ಷಿಸಲು ಸರಕಾರ ಮುಂದಾಗಬೇಕು. ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ರವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಜಿಲ್ಲೆಯಲ್ಲಿ ನಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ಮೆಡಿಕಲ್ ಮಾಫಿಯಾ ಬಗ್ಗೆ ನಿಗಾ ಇಡಬೇಕು ಅದಕ್ಕಾಗಿ ಉನ್ನತ ಮಟ್ಟದ ಸಮಿತಿಯನ್ನು ನಿಯೋಜನೆ ಮಾಡಿ ಸಮಗ್ರ ತನಿಖೆ ನಡೆಸಬೇಕು ಇತ್ತೀಚೆಗೆ ಆರೋಗ್ಯ ಸಚಿವರು ಘೋಷಿಸಿದಂತೆ ಪ್ರತಿಯೊಂದು ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆಗೆ ಸರಕಾರ ನಿಗದಿಪಡಿಸಿದ ದರಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು, ವೈದ್ಯರಿಗೆ ರೋಗಿಯನ್ನು ಪರೀಕ್ಷೆ ಮಾಡುವ ಶುಲ್ಕವನ್ನು ಸರಕಾರ ನಿಗದಿಪಡಿಸಬೇಕು, ವೈದ್ಯರ ನಿರ್ಲಕ್ಷದಿಂದ ರೋಗಿಯ ಪ್ರಾಣಕ್ಕೆ ದಕ್ಕೆಯಾದರೆ ಅಂತಹ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ನಿವ್ರತ್ತ ನ್ಯಾಯಾದೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಅರೋಪಿ ವೈದ್ಯರಿಗೆ ಸರಕಾರ ನೀಡಿದ ವೈದ್ಯಕೀಯ ಅನುಮತಿಯನ್ನು ಕೂಡಲೇ ಹಿಂಪಡೆದು ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಈ ಮೂಲಕ ಸರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ಹಗಲು ದರೋಡೆಯನ್ನು ಹಂತಹಂತವಾಗಿ ನಿಯಂತ್ರಣಕ್ಕೆ ತರಬೇಕು ಇಲ್ಲದಿದ್ದರೆ ಇದರ ವಿರುದ್ಧ ಜಿಲ್ಲಾದ್ಯಂತ ಸಮಾನ ಮನಸ್ಕರನ್ನು ಸೇರಿಸಿಕೊಂಡು ತೀವ್ರ ರೀತಿಯ ಹೋರಾಟಗಳನ್ನು ಮುಂದಿನ ದಿನಗಳಲ್ಲಿ ನಡೆಸಲಿದ್ದೇವೆ ಎಂದು ಅನ್ವರ್ ಸಾದತ್ ಬಜತ್ತೂರು ಪತ್ರಿಕಾ ಪ್ರಕಟಣೆಯಲ್ಲಿ ಸರಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.