ಮಂಗಳೂರು; ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶದಿಂದ ಹರಿದು ಬಂದಿತ್ತಾ ಹಣ ಎಂಬ ಅನುಮಾನ ದಟ್ಟವಾಗಿದ್ದು ವಿವಿಧ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ 2022 ರಲ್ಲಿ ಕೊಲೆಯಾದ ಫಾಝಿಲ್ ಸಹೋದರ ಆದಿಲ್ ಪ್ರಮುಖ ಆರೋಪಿ. ಈತ ಸುಹಾಸ್ ಹತ್ಯೆಗೆ ಸುಫಾರಿ ನೀಡಿದ್ದ. ಈತನಿಗೆ ವಿದೇಶದಿಂದ ಹಣ ಕಳುಹಿಸಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಹತ್ಯೆ ನಡೆಸಲು ನೆರವು ನೀಡುವಂತೆ ಪ್ರಮುಖ ಆರೋಪಿ ಸಫ್ವಾನ್ ಅನೇಕರನ್ನು ಸಂಪರ್ಕಿಸಿದ್ದ. ಆ ಸಂದರ್ಭದಲ್ಲಿ ಜೈಲು, ಜಾಮೀನಿಗೆ ನೆರವಿಗಾಗಿ ಕೈಚಾಚಿದ್ದ ಎನ್ನಲಾಗಿದೆ. ಕೊಲೆ ಮಾಡಿದ ಕೂಡಲೇ ಪೊಲೀಸರಿಗೆ ಶರಣಾಗುವ ಬಗ್ಗೆಯೂ ಹಂತಕರ ಗುಂಪು ಚರ್ಚೆ ನಡೆಸಿತ್ತು. ಹಂತಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಾಣದ ಕೈಗಳ ಗುಂಪು ಮಾಡಿತ್ತೇ ಎಂಬ ಬಲವಾದ ಅನುಮಾನ ವ್ಯರಕ್ತವಾಗಿದೆ.
ಇದರ ಮಧ್ಯೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಆರೋಪಿಗಳು ಚಿಕ್ಕಮಗಳೂರಿನ ಕಳಸದ ರೆಸಾರ್ಟ್ ಒಂದರಲ್ಲಿ ಏ.2 ರಂದು ನೈಟ್ ಪಾರ್ಟಿ ಮಾಡಿದ್ದಾರೆ. ಹತ್ಯೆಗೆ ಸ್ಕೆಚ್ ರೂಪಿಸಲೆಂದೇ ಪಾರ್ಟಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಕ್ಯಾಂಪ್ ಫೈರ್ ಹಾಕಿ ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳಾದ ಮುಝಮ್ಮಿಲ್, ನಿಯಾಜ್ ಹಾಗೂ ಚಿಕ್ಕಮಗಳೂರು ಮೂಲದ ರಂಜಿತ್ ಪಾರ್ಟಿ ಮಾಡಿದ್ದಾರೆ. ಈ ಮೂವರ ಜೊತೆ ಇನ್ನೂ ಐದು ಜನ ಅಪರಿಚಿತರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.