ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಭಾಷ್ ಶೆಣೈ(52) ಅನಾರೋಗ್ಯದಿಂದ ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಲತಃ ಬೆಳ್ಳಾರೆ ನಿವಾಸಿಯಾಗಿರುವ ಸುಭಾಷ್ ಶೆಣೈ ಅವರು ಬಿಸಿರೋಡ್ ಬಳಿ ಮನೆ ಮಾಡಿ ವಾಸವಾಗಿದ್ದರು.
ಕಾನ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದು ಮಂಗಳೂರು ಸಂಚಾರಿ ಠಾಣೆ , ಬಂಟ್ವಾಳ , ಪುಂಜಾಲಕಟ್ಟೆ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಹೆಡ್ ಕಾನ್ಟೇಬಲ್ ಅಗಿ ಬಡ್ತಿ ಹೊಂದಿ, ನಂತರ ವಿವಿಧ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಎಎಸ್ಐ ಆಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ವೇಣೂರು ಪೊಲೀಸ್ ಠಾಣೆಯಲ್ಲಿ ಸಹೋದ್ಯೋಗಿಗಳ ಜೊತೆ ಆಯುಧ ಪೂಜೆಯಲ್ಲಿ ಭಾಗವಹಿಸಿ ನಂತರ ಮನೆಗೆ ಹೋದ ಮರುದಿನವೇ ಅನಾರೋಗ್ಯದಿಂದ ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಸುಭಾಷ್ ಶೆಣೈಯವರಿಗೆ ಪತ್ನಿ ಹಾಗೂ ಇಂಜಿನಿಯರಿಂಗ್ ಮಾಡುತ್ತಿರುವ ಮಗ ಮತ್ತು ಪಿಯುಸಿ ಓದುತ್ತಿರುವ ಮಗಳು ಇದ್ದು, ಇವರ ನಿಧನಕ್ಕೆ ಇವರ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಇಂದು ಸಂಜೆ 7 ಗಂಟೆಗೆ ಬಂಟ್ವಾಳ ನಗರ ಠಾಣೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ಸಂಸ್ಕಾರ ಅವರ ಬೆಳ್ಳಾರೆಯ ಸ್ವಗೃಹದಲ್ಲಿ ನೆರವೇರಲಿದೆ..