ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವಿರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಗುಣಾತ್ಮಕವಾದ ಬದಲಾವಣೆಯ ಹೊಸ ಕಲ್ಪನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ವಿರೇಂದ್ರ ಹೆಗ್ಗಡೆಯವರ ನಾಮನಿರ್ದೇಶನ ಮಾಡಲಾಗಿದೆ. ಕರ್ನಾಟಕ ಗೌರವ ಹಾಗೂ ಹೆಮ್ಮೆಪಡುವಂತಹ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಫಲಾಪೇಕ್ಷೆಯಿಲ್ಲದೇ ಜನಕಲ್ಯಾಣಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಸುದೀರ್ಘ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಜನರ ಸಮಸ್ಯೆಗಳನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕ, ಕೆರೆಗಳ ನಿರ್ಮಾಣ, ಕೃಷಿ ಯಂತ್ರೋಪಕರಣ ಪೂರೈಕೆ, ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು, ಮದ್ಯವ್ಯಸನ ವಿರೋಧಿ ಅಭಿಯಾನ, ಹೀಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸಗಳನ್ನು ಮಾಡಿರುವ ಶ್ರೀಯುತರು ಕೇವಲ ಮಾತಿನಲಲ್ಲ, ಕೃತಿಯಲ್ಲಿಯೂ ಅವರ ಸೇವೆ ಅಮೋಘವಾದದ್ದು ಎಂದು ಸಿಎಂ ಪ್ರಶಂಸಿದ್ದಾರೆ.
ಅಲ್ಲದೇ ಒಬ್ಬ ವ್ಯಕ್ತಿ ಸರ್ಕಾರಕ್ಕೆ ಸರಿ ಸಮಾನವಾಗಿ ಜನಪರ ಕೆಲಸ ಮಾಡುತ್ತಿರುವುದು ಒಂದು ದಾಖಲೆ ಎಂದು ಹೇಳಿರುವ ಬಸವರಾಜ ಬೊಮ್ಮಾಯಿ, ಇವರ ಕೆಲಸಗಳು ಇತರ ರಾಜ್ಯಗಳಿಗೂ ಮಾದರಿಯಾಗಿದೆ. ಶ್ರೇಷ್ಠ ವ್ಯಕ್ತಿತ್ವದ ಹಿರಿಯರಿಗೆ ರಾಜ್ಯಸಭಾ ಸದಸ್ಯರ ಸ್ಥಾನ ದೊರೆತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಇದರಿಂದ ರಾಜ್ಯಸಭೆಗೆ ದೊಡ್ಡ ಗೌರವ ಸಿಗಲಿದೆ. ಕರ್ನಾಟಕದ ಶ್ರೇಷ್ಠ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.