ಉಪ್ಪಿನಂಗಡಿ; ಬಕ್ರೀದ್ ಹಬ್ಬಕ್ಕೆಂದು ಆಡುಗಳನ್ನು ಖರೀದಿಸಲು ರಾಜಸ್ಥಾನಕ್ಕೆ ಹೋಗಿದ್ದ ಯುವಕರು ಸಂಪರ್ಕಕ್ಕೆ ಸಿಗದೇ ನಾಪತ್ತಾಗಿರುವ ಘಟನೆ ನೆಕ್ಕಿಲಾಡಿಯಲ್ಲಿ ನಡೆದಿದೆ. ಯುವಕರನ್ನು ಅಲ್ಲಿನ ವ್ಯಕ್ತಿಗಳು ಬ್ಲಾಕ್ಮೇಲ್ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತ ಯುವಕ ನೆಕ್ಕಲಾಡಿಯ ಮುಹಮ್ಮದ್ ಝಬೈರ್ ಆರೀಸ್ ಅವರ ತಂದೆ ಇಬ್ರಾಹಿಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಮುಹಮ್ಮದ್ ಝಬೈರ್ ಆರೀಸ್ ಮತ್ತು ಆತನ ಸ್ನೇಹಿತರು ಬಕ್ರೀದ್ ಹಬ್ಬಕ್ಕೆ ಆಡುಗಳನ್ನು ಖರೀದಿ ಮಾಡಲು ರಾಜಸ್ಥಾನಕ್ಕೆ ಹೋಗಿದ್ದು, ಅಲ್ಲಿನ ಒಬ್ಬ ವ್ಯಕ್ತಿ ಆಡು ಖರೀದಿ ಮಾಡಲು ಒಪ್ಪಂದ ಮಾಡಿದ್ದರು. ಒಪ್ಪಂದದ ಪ್ರಕಾರ ಲಾರಿ ಬಾಡಿಗೆಗೆ 2 ಲಕ್ಷ ರೂಪಾಯಿಗಳನ್ನು ಮುಂಗಡ ಪಾವತಿಸಲಾಗಿತ್ತು. ಆಡು ತಲುಪಿದ ನಂತರ ಉಳಿದ ಹಣ ನೀಡುವುದಾಗಿ ಒಪ್ಪಂದವಾಗಿತ್ತು.
ಆದರೆ ಝಬೈರ್, ಸ್ನೇಹಿತರು ರಾಜಸ್ಥಾನ ತಲುಪಿದಾಗ ಅಲ್ಲಿ ಒಪ್ಪಂದ ಮಾಡಿಕೊಂಡ ವ್ಯಕ್ತಿ 10 ಲಕ್ಷ ರೂಪಾಯಿ ನೀಡಿದರೆ ಮಾತ್ರ ಆಡು ನೀಡುವುದಾಗಿ ಹೇಳಿದ್ದು, ದೂರವಾಣಿ ಮೂಲಕ ಝಬೈರ್ ಕುಟುಂಬಕ್ಕೆ ತಿಳಿಸಿದ್ದು, ಕುಟುಂಬದವರು ಕೂಡಲೇ ಹಣ ಆತನ ಬ್ಯಾಂಕ್ಗೆ ಹಾಕಿದ್ದಾರೆ. ಹಣ ತಲುಪಿದ ನಂತರ ಆಡುಗಳನ್ನು ಲಾರಿಗೆ ಲೋಡ್ ಮಾಡಿರುವ ಫೋಟೋವನ್ನು ಝಬೈರ್ ಕಳುಹಿಸಿರುವ ಕುರಿತು ವರದಿಯಾಗಿದೆ.
ಆದರೆ ಆ ವ್ಯಕ್ತಿ ಮತ್ತೆ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ, ಆಡು ಕೊಡುವುದಿಲ್ಲ, ಝಬೈರ್ ಮತ್ತು ಆತನ ಸ್ನೇಹಿತನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗ ಝಬೈರ್ ಫೋನಿನಲ್ಲಿ ತಿಳಿಸಿದ್ದಾನೆ. ನಂತರ ಫೋನ್ ಸ್ವಿಚ್ ಆಫ್ ಆಗಿದೆ. ಮನೆ ಮಂದಿ ಕೂಡಲೇ ಉಪ್ಪಿನಂಗಡಿ ಪೊಲೀಸ್ ಕಂಟ್ರೋಲ್ ರೂಂ ಗೆ ಸಂಪರ್ಕ ಮಾಡಿ ವಿಷಯ ತಿಳಿಸಿದ್ದಾರೆ. ರಾಜಸ್ಥಾನ ಪೊಲೀಸರಿಗೆ ವಿಷಯವನ್ನು ಉಪ್ಪಿನಂಗಡಿ ಪೊಲೀಸರು ತಿಳಿಸಿದ್ದಾರೆ.
ಝಬೈರ್ ಮತ್ತು ಆತನ ಸ್ನೇಹಿತರ ಮೊಬೈಲ್ ಲೊಕೇಶನ್ ಪತ್ತೆ ಮಾಡಿ ಪೊಲೀಸ್ ಠಾಣೆಗೆ ಕರೆತಂದಿರುವುದಾಗಿ ಆರಂಭದಲ್ಲಿ ತಿಳಿಸಿದ್ದು, ನಂತರ ಕರೆ ಕಡಿತ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.ಝಭೈರ್ನ ಮನೆ ಮಂದಿ ಆತಂಕದಲ್ಲಿದ್ದು, ರಾಜಸ್ಥಾನ ಪೊಲೀಸರ ನಡೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪುತ್ತೂರು ಶಾಸಕರ ಸಹಾಯವನ್ನು ಕುಟುಂಬ ಕೋರಿದೆ.