ಉಪ್ಪಿನಂಗಡಿ: ಮನೆಯ ಮುಂದೆ ಆಟವಾಡುತ್ತಿದ್ದ ಮಗುವೊಂದು ಏಕಾಏಕಿಯಾಗಿ ಕಣ್ಮರೆಯಾಗಿ ಎಲ್ಲರ ಅಂತಂಕಕ್ಕೆ ಕಾರಣವಾಗಿ ಕೊನೆಗೆ ಸುರಕ್ಷಿತವಾಗಿ ಸಿಕ್ಕಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಏನಿದು ಘಟನೆ
ಹಳೇ ಬಸ್ ನಿಲ್ದಾಣದ ಪರಿಸರದಲ್ಲಿ ಅಪಾರ್ಟ್ ಮೆಂಟ್ ಒಂದರಲ್ಲಿ ಬಾಡಿಗೆದಾರರಾಗಿರುವ ಅಶ್ರಫ್ ದಂಪತಿಯ ಪುತ್ರ ಇಹಾನ್
ಕಣ್ಮರೆಯಾದ ಬಾಲಕ. ಕಾಣೆಯಾಗುತ್ತಿದ್ದಂತೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು ಮತ್ತು ಮನೆಯವರು ಎಲ್ಲೆಡೆ ಹುಡುಕಾಟಕ್ಕೆ ಮುಂದಾದರು. ಆಗಾಗಲೇ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಕೆಲವರು ಪಕ್ಕದಲ್ಲೇ ಇರುವ ನಾಲ್ಕು ಮಾಳಿಗೆಯ ಇನ್ನೊಂದು ವಸತಿ ಸಮುಚ್ಚಯದ ತಾರಸಿಯ ಮೇಲೆ ಹೋಗಿ ಪರಿ ಶೀಲಿಸಿದಾಗ ಅಲ್ಲಿ ಮಗು ಮಲಗಿ ನಿದ್ರಿಸುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಯಿತು. ರೋದಿಸುತ್ತಿದ್ದ ತಾಯಿಯ ಮುಖದಲ್ಲಿ ಖುಷಿ ಕಂಡಿತು.
ನಡೆದದ್ದೇನು?
ವಸತಿ ಸಮುಚ್ಚಯದ ಬಳಿ ಆಟ ವಾಡುತ್ತಿದ್ದ ಮಗು ಸಾಯಂಕಾಲದ ವೇಳೆಗೆ ಪೇಟೆ ಕಡೆಗೆ ಬಂದಾಗ ವ್ಯಾಪಾರಿಗಳು ಮನೆಗೆ ಮರಳುವಂತೆ ಸೂಚಿಸಿದ್ದರು. ಹಿಂದಿರುಗಿ ಮನೆಗೆ ಹೋಗಲು ದಾರಿ ತಿಳಿಯದಾದ ಬಾಲಕ ಅಲ್ಲಿನ ವಸತಿ ಸಮುಚ್ಚಯವೊಂದರ ಮೇಲ್ಭಾಗಕ್ಕೆ ಹೋಗಿತ್ತು. ಆ ವೇಳೆ ಭಯ ಹಾಗೂ ದಣಿವಿನಿಂದ ಅಲ್ಲೇ ನಿದ್ರೆಗೆ ಜಾರಿರಬಹುದು ಎಂದು ಅಂದಾಜಿಸಲಾಗಿದೆ.