ಬೆಳ್ತಂಗಡಿ: ಉಜಿರೆ ಗ್ರಾ.ಪಂ. ಹಾಗೂ ಶಾಸಕ ಹರೀಶ್ ಪೂಂಜ ಅವರ ದೂರದೃಷ್ಟಿಯಡಿ ಉಜಿರೆ ಅತ್ತಾಜೆಯಲ್ಲಿರುವ 3 ಎಕ್ರೆ ವಿಸ್ತಾರದ ಕೆರೆ ಹಾಗೂ ಸುತ್ತಲಿರುವ 11 ಎಕ್ರೆ ಪ್ರದೇಶವನ್ನು ಪ್ರವಾಸಿ ತಾಣವಾಗಿಸುವಲ್ಲಿ ಹೊಸ ರೂಪರೇಖೆ ಯೊಂದು ಸಿದ್ಧಗೊಂಡಿದೆ.
ಉಜಿರೆ ಪೇಟೆಯಿಂದ 2 ಕಿ.ಮೀ. ದೂರದ ಅತ್ತಾಜೆ ಕೆರೆಯು ಅಳಿವಿನಂಚಿಗೆ ಸರಿದಿತ್ತು. ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಸ್ಥಳೀಯ 60ಕ್ಕೂ ಅಧಿಕ ಕುಟುಂಬದ ಮಹಿಳೆಯರು ನರೇಗಾದಡಿ ಕೆರೆ ಹೂಳೆತ್ತುವ ಮೂಲಕ ಮರುಹುಟ್ಟು ನೀಡಿದ್ದರು. ಬಳಿಕ ಇಲ್ಲೊಂದು ಉತ್ತಮ ಉದ್ಯಾನವನ ನಿರ್ಮಿಸುವ ಮಹದಾಸೆ ಸ್ಥಳೀಯಾಡಳಿತಕ್ಕೆ ಬಂದಿತ್ತು. ಅದನ್ನು ಶಾಸಕರು ದೊಡ್ಡ ಮಟ್ಟಕ್ಕೆ ವಿಸ್ತರಿಸುವ ಸಲಹೆ ನೀಡಿದಂತೆ ಸಣ್ಣ ನೀರಾವರಿ ಇಲಾಖೆಯಿಂದ 1.75 ಲಕ್ಷ ರೂ. ಒದಗಿಸಿದ್ದು ಉಳಿದ ಅನುದಾನ ಸೇರಿ ಪ್ರಸಕ್ತ 2.20 ಕೋ.ರೂ. ಲಭ್ಯತೆಯಲ್ಲಿ ಆರಂಭಿಕವಾಗಿ ಹೂಳು ತೆರವು ತಡೆಗೋಡೆ ನಿರ್ಮಾಣ ನೀರಾವರಿ ಇಲಾಖೆಯಿಂದ ನಡೆಯಲಿದೆ.
ಅತ್ತಾಜೆ ಕೆರೆಯು 3 ಎಕ್ರೆ ಸ್ಥಳದಲ್ಲಿ ವ್ಯಾಪಿಸಿದೆ. ಉಳಿದಂತೆ 11 ಎಕ್ರೆ ಇತರ ಸ್ಥಳವಿದ್ದು, ಈ ಪ್ರದೇಶದಲ್ಲಿ ಉದ್ಯಾನವನ, ಪವಿತ್ರ ವನ, ಎಂಆರ್ ಎಫ್ ತ್ಯಾಜ್ಯ ಸಂಸ್ಕರಣ ಘಟಕ, ವಾಕಿಂಗ್ ಟ್ರ್ಯಾಕ್, ಮಕ್ಕಳ ಪಾರ್ಕ್ ನಿರ್ಮಾಣಗೊಳ್ಳಲಿದೆ. ಇದರ ನಿರ್ವಹಣೆಯನ್ನು ಮಹಿಳಾ ಸಂಜೀವಿನಿ ಒಕ್ಕೂಟಕ್ಕೆ ನೀಡುವ ಮೂಲಕ ಮಹಿಳೆ ಯರಿಗೊಂದು ಆದಾಯ ವರಮಾನ ಗೊಳಿಸುವ ಚಿಂತನೆ ಗ್ರಾ.ಪಂ.ನದ್ದಾಗಿದೆ.
ಕೆರೆ ಅಭಿವೃದ್ಧಿಯ ಪ್ರಥಮ ಹಂತವಾಗಿ ಸಣ್ಣ ನೀರಾವರಿ ಇಲಾಖೆಗೆ 1.75 ಕೋ.ರೂ. ವೆಚ್ಚದಲ್ಲಿ ಹೂಳೆತ್ತಲು ಟೆಂಡರ್ ಕರೆಯಲಾಗಿದೆ. ಕೆರೆ ಮೇಲ್ಬಾಗದ ತಡೆಗೋಡೆ ನಿರ್ಮಾಣ ಕಾಮ ಗಾರಿ ಪ್ರಗತಿಯಲ್ಲಿದೆ. ಕೆರೆ ತುಂಬಿದ ಬಳಿಕ ಅಧಿಕ ನೀರು ಹೊರ ಹೋಗಲು ಇನ್ನೊಂದು ಬದಿಯಲ್ಲಿ ರುವ ಕಿಂಡಿಗಳ ದುರಸ್ತಿಯಾಗ ಲಿದೆ. ಕೆರೆಯ ಮೇಲ್ಬಾಗದಲ್ಲಿರುವ ಇನ್ನೊಂದು ಕೆರೆ ಹಾಗೂ ಸುತ್ತ ಇರುವ 2 ಕೆರೆಗಳು ಅಭಿವೃದ್ಧಿಯಾದಲ್ಲಿ ತಾಲೂಕಿನ ಅತ್ಯುತ್ತಮ ಪ್ರವಾಸಿ ತಾಣವಾಗಿ ಕಂಗೊಳಿಸಲಿದೆ.