ಉಡುಪಿ; ಬೇಕಾಬಿಟ್ಟಿ ವಾಹನ ಓಡಿಸುತ್ತಾ ಕರ್ಕಶ ಶಬ್ದ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಬೈಕ್ ಸವಾರರಿಗೆ ಉಡುಪಿ ಪೊಲೀಸರು ಭರ್ಜರಿ ಶಾಕ್ ಕೊಟ್ಟಿದ್ದಾರೆ.
ಮಣಿಪಾಲ ವ್ಯಾಪ್ತಿಯಲ್ಲಿ ಕರ್ಕಶ ಶಬ್ದ ಹೊರಡಿಸುತ್ತಾ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದ 50 ದ್ವಿ ಚಕ್ರ ವಾಹನದ ಲೆನ್ಸರ್ ಗಳನ್ನು ಕಿತ್ತು, ಅದರ ಮೇಲೆ ರೋಡ್ ರೋಲರ್ ಚಲಾಯಿಸಿ ಅನುಪಯುಕ್ತಗೊಳಿಸಲಾಯಿತು.
ಜನವರಿ 18ರಿಂದ ಫೆಬ್ರವರಿ 17ರ ತನಕ ರಸ್ತೆ ಸುರಕ್ಷತಾ ಸಪ್ತಾಹ ಅಡಿಯಲ್ಲಿ ‘ಸಡಕ್ ಸುರಕ್ಷಾ – ಜೀವನ್ ಸುರಕ್ಷಾ’ ಎಂಬ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ಮಣಿಪಾಲ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಜಾರಿಗೊಳಿಸಿದ್ದಾರೆ.
ಕಳೆದೊಂದು ತಿಂಗಳಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ದ್ವಿಚಕ್ರ ವಾಹನದ ಸವಾರರು ಹಾಗೂ ಓರ್ವ ನಾಲ್ಕು ಚಕ್ರದ ವಾಹನ ಸವಾರನ ವಿರುದ್ದ ಪ್ರಕರಣ ದಾಖಲಿಸಿ 25,500 ರೂ. ದಂಡ ವಸೂಲಿ ಮಾಡಲಾಗಿದೆ.
ವಾಹನ ಸವಾರರನ್ನು ಹಿಡಿದಾಗ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳನ್ನು ವಾಪಾಸ್ ನೀಡಿದ್ದಲ್ಲಿ ಮರು ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಪ್ರಾಯೋಗಿಕವಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡ 51 ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಅನುಪಯುಕ್ತಗೊಳಿಸಲಾಯಿತು.
“ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಈ ರೀತಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಎಲ್ಲಾ ಠಾಣೆಯಲ್ಲಿ ಮಾಡಲಾಗುತ್ತದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದ್ದಾರೆ.