ಮಂಗಳೂರು : ಬಂಟ್ವಾಳದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಗೆ ಮಾನಸಿಕ ಕಿರುಕುಳ ನೀಡದ ಪ್ರಕರಣಕ್ಕ ಸಂಬಂಧಪಟ್ಟಂತೆ ಈಗಾಗಲೇ ಮೂವರು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇವರ ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿಯೊಂದು ಲಭಿಸಿದೆ.
ಈ ಮೂವರು ಕೆಲವು ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರಿಗೂ ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ಪೊಲೀಸ್ ಕಸ್ಟಡಿ ಸಂದರ್ಭ ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾರೆ.
ಈ ಆರೋಪಿಗಳು ಕಾಲೇಜಿನಲ್ಲಿ ತಮ್ಮದೇ ಮಾತುಗಳನ್ನು ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೆ ಯಾರಿಗೂ ಭವಿಷ್ಯವಿಲ್ಲ ಎಂಬಂತೆ ವರ್ತಿಸುತ್ತಿದ್ದರು ಎನ್ನಲಾಗಿದೆ. ಈ ಹಿಂದೆಯೂ ಕೆಲವು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಮೇಲೆ ಇವರು ದಬ್ಬಾಳಿಕೆ ನಡೆಸಿದ್ದರು. ಈ ಮೂಲಕ ಪೊಲೀಸರಿಗೂ ದೂರು ನೀಡದಂತೆ ನೋಡಿಕೊಂಡಿದ್ದರು ಎಂಬುದು ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳಲ್ಲೊಬ್ಬನ ಮೇಲೆ 2019ರಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬಂಟ್ವಾಳ ಠಾಣೆಯಲ್ಲಿ ದಾಖಲಾಗಿತ್ತು. ಆತನ ಮೇಲೆ ಪೊಲೀಸರು ಆರೋಪ ಪಟ್ಟಿ ಕೂಡ ಸಲ್ಲಿಸಿದ್ದರು. ಆದರೂ ಆತ ತನ್ನ ಕಿರುಕುಳವನ್ನು ಮುಂದುವರಿಸಿದ್ದ ಎಂಬುದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಮುಖ ಆರೋಪಿ ಬೆಳ್ತಂಗಡಿ ಲಾಯಿಲ ನಿವಾಸಿ ಪ್ರಕಾಶ್ ಶೆಣೈಗೆ ನಿನ್ನೆ ಸಂಜೆ ಮಂಗಳೂರು ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಉಳಿದ ಇಬ್ಬರು ಆರೋಪಿಗಳನ್ನು ತನಿಖೆಗಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.