ಕಡಬ:ರೈಲ್ವೇ ಟ್ರ್ಯಾಕ್ ನಲ್ಲಿ ಅಣ್ಣನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ತಮ್ಮ ಕಾರಣ ಬಹಿರಂಗ ಮಾಡಿದ್ದಾನೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿ ಹನುಮಪ್ಪ (42) ನಿಗೆ ಕಡಬ ಸಮೀಪದ ಬಜಕರೆ ರೈಲು ನಿಲ್ದಾಣದ ಬಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಮ್ಮ ನಿಂಗಪ್ಪ (21) ಕೊಲೆಗೆ ಯತ್ನಿಸಿದ್ದ. ಗಂಭೀರ ಗಾಯಗೊಂಡಿರುವ ಹನುಮಪ್ಪ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆಯ ಬೆನ್ನಲ್ಲೇ ರೈಲ್ವೇ ಪೊಲೀಸರು ನಿಂಗಪ್ಪನನ್ನು ಬಂಧಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ಗೊತ್ತಾಗುತ್ತಿದ್ದಂತೆ ಕಡಬ ಠಾಣಾ ಎಸ್.ಐ ಅಭಿನಂದನ್ ಮತ್ತು ಸಿಬ್ಬಂದಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ನಿಂಗಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಅಣ್ಣನಿಗೆ ವಿಪರೀತ ಕುಡಿತದ ಚಟವಿದೆ. ಈ ಚಟದಿಂದಲೇ ಬೇಸತ್ತು ಈತನ ಹೆಂಡತಿ 14 ವರ್ಷದ ಹಿಂದೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದ. ಇಂದು ನನ್ನ ಜೊತೆ ಕೂಡಾ ಗಲಾಟೆ ಮಾಡಿದ. ಈ ಎಲ್ಲಾ ಹಿಂಸೆಗಳಿಂದ ರೋಸಿ ಹೋಗಿ ಕೊಲೆ ಮಾಡಲು ನಿರ್ಧಾರ ಮಾಡಿದ್ದೆ ಎಂದಿದ್ದಾನೆ.
ಕಡಬ ಪೊಲೀಸರು ಆರೋಪಿ ಹಾಗೂ ಪ್ರಕರಣವನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ.