ಉಡುಪಿ : ಕೇರಳ ತಮಿಳುನಾಡು ಗಡಿಭಾಗದ ವಾಳಯಾರ್ ನಲ್ಲಿ ಟೊಮೇಟೋ ಜ್ವರ ಭಾದಿಸಿದ್ದು 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಜ್ವರದ ಲಕ್ಷಣಗಳು ಕಂಡುಬಂದಿರುತ್ತದೆ. ಉಡುಪಿ ಜಿಲ್ಲೆಯಲ್ಲಿ ಈ ರೋಗದ ಲಕ್ಷಣಗಳು ಕಂಡುಬಂದಿರುವುದಿಲ್ಲ. ಆದರೆ ಪಕ್ಕದ ರಾಜ್ಯದಲ್ಲಿ ಟೊಮೇಟೋ ಜ್ವರವು ಪತ್ತೆಯಾದ ಕಾರಣ ಗಡಿಭಾಗದ ಜಿಲ್ಲೆಗಳು ಇದರ ಕುರಿತು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಹಾಗೂ ಟೊಮೇಟೋ ಜ್ವರಕ್ಕೆ ಯಾವುದೇ ಸಂಬಂಧವಿರುವುದಿಲ್ಲ, ಈ ಜ್ವರವೂ ವೈರಸ್ ನಿಂದ ಹರಡುತ್ತಿದ್ದು, ಜ್ವರದ ಲಕ್ಷಣವನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಮಕ್ಕಳ ದೇಹದಲ್ಲಿ ಟೊಮೆಟೋ ಆಕಾರದ ಗುಳ್ಳೆಗಳು ಏಳುವುದರಿಂದ ಈ ರೋಗಕ್ಕೆ ಟೊಮೆಟೋ ಜ್ವರ ಎಂದು ಹೆಸರಿಡಲಾಗಿದೆ.
ಚಿಕೂನ್ ಗೂನ್ಯ ಲಕ್ಷ್ಮಣವನ್ನು ಹೋಲುವ ಟೊಮೇಟೋ ಜ್ವರದಿಂದ ಗುಳ್ಳೆಯ ಜೊತೆಗೆ, ಕೆಮ್ಮು, ಶೀತ ಉಂಟಾಗುತ್ತದೆ. ಒಬ್ಬರಿಂದ ಒಬ್ಬರಿಗೆ ಹರಡುವ ಈ ರೋಗದಿಂದ ಸೋಂಕಿತ ಮಕ್ಕಳು ಕ್ವಾರಂಟೈನ್ ಆಗಬೇಕಾಗುತ್ತದೆ. ಗುಳ್ಳೆಗಳನ್ನು ಯಾವುದೇ ಕಾರಣಕ್ಕೂ ಉಜ್ಜಬಾರದು.
ಈ ಕುರಿತಂತೆ ಜಿಲ್ಲಾ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ತೀವ್ರ ನಿಗವಹಿಸಬೇಕಾಗಿದ್ದು, ಮೇಲ್ಕಂಡ ಲಕ್ಷ್ಮಣಗಳು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಕೇರಳ ರಾಜ್ಯದಿಂದ ಬರುವ ಜನ ಹಾಗೂ ಯಾತ್ರಿಕರು, ಕೊಲ್ಲೂರು ಮುಕಾಂಬಿಕಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಇತರ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಟೊಮೇಟೋ ಜ್ವರದ ಕುರಿತಂತೆ ಗಮನ ಹರಿಸಬೇಕಾಗಿದ್ದು, ಖಾಸಗಿ ಆಸ್ಪತ್ರೆಗಳು ಹಾಗೂ ಮಕ್ಕಳ ತಜ್ಞರು ಜ್ವರದ ಲಕ್ಷಣ ಕಂಡುಬಂದಲ್ಲಿ ಪರೀಕ್ಷೆ ನಡೆಸಿ ಮಾಹಿತಿ ನೀಡಬೇಕಾಗಿರುತ್ತದೆ.
ಸಾರ್ವಜನಿಕರು ಟೊಮಟೋ ಜ್ವರದ ಬಗ್ಗೆ ಭೀತಿಗೊಳಗಾಗದೆ ನೈರ್ಮಲ್ಯವನ್ನು ಕಾಪಾಡಿಕೊಳ್ಳುದರ ಜೊತೆಗೆ ನಿರ್ಜಲೀಕರಣವಾಗದಂತೆ ಹೆಚ್ಚಿನ ಗಮನ ಹರಿಸಿ, ಶುದ್ಧ ನೀರು ಸೇವಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.