ಬೆಳ್ತಂಗಡಿ : ಕರ್ನಾಟಕದಲ್ಲಿ ನಕ್ಸಲ್ ಹೋರಾಟ ಇಂದಿಗೆ ಅಂತ್ಯವಾಗಲಿದೆ. ಆರು ಜನ ನಕ್ಸಲರು ತಮ್ಮ ಕಾಡಿನ ಹೋರಾಟವನ್ನು ಅಂತ್ಯಮಾಡಿ ಮುಖ್ಯವಾಹಿನಿಗೆ ಬರುತ್ತಿದ್ದು ಇಂದು ಸಂಜೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹಸಚಿವರ ಮುಂದೆ ಶರಣಾಗಲಿದ್ದಾರೆ.
ಆರು ಜನ ನಕ್ಸಲರ ತಂಡದಲ್ಲಿರುವ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕೋಟ್ಯಂದಡ್ಕ ನಿವಾಸಿ ಸುಂದರಿ @ಗೀತಾ (46) ಎರಡು ದಶಕದ ಹೋರಾಟವನ್ನು ಅಂತ್ಯ ಹಾಡಿದ್ದಾರೆ. 2007 ರಲ್ಲಿ ಹೋರಾಟ ಮಾಡಲು ಮನೆ ಬಿಟ್ಟು ಹೋಗಿ ಭೂಗತವಾಗಿದ್ದುಕೊಂಡು ಬಂದೂಕು ಹಿಡಿದ 17 ವರ್ಷದ ಬಳಿಕ ಮತ್ತೆ ನಾಡಿಗೆ ಬರುತ್ತಿದ್ದಾರೆ. 17 ವರ್ಷ ಭೂಗತವಾಗಿ ಯಾರಿಗೂ ಕಾಣದೆ ಇದ್ದ ಸುಂದರಿ ಮೊದಲ ಬಾರಿಗೆ ಕಾಡಿನಲ್ಲಿ ತಲೆಗೆ ಕ್ಯಾಪ್ ಧರಿಸಿ ಇಂದು ತಿಂಡಿ ಮಾಡುತ್ತಿರುವ ದೃಶ್ಯ ಕ್ಯಾಮರದ ಕಣ್ಣಿಗೆ ಬಿದ್ದಿದೆ. ಈ ಫೋಟೋ ಮಹಾಎಕ್ಸ್ ಪ್ರೆಸ್ ವೆಬ್ ಸೈಟಿಗೆ ಲಭ್ಯವಾಗಿದೆ.
ಇಂದು ಬೆಳಗ್ಗೆ ಚಿಕ್ಕಮಗಳೂರಿನ ಕಾಡಿನಲ್ಲಿ ಆರು ನಕ್ಸಲರು ಚಿಕನ್ , ಪಲಾವ್ , ಕೇಸರಿಬಾತ್ ತಯಾರಿಸಿದ್ದು ಇದನ್ನು ಶರಣಾಗತಿ ಸಮಿತಿಯವರಿಗೆ ನೀಡಿ ಎಲ್ಲರೂ ಜೊತೆಯಲ್ಲಿ ಸೇವಿಸಿ ಕಾಡಿನ ಹೋರಾಟಕ್ಕೆ ಗುಡ್ ಬೈ ಹೇಳಿ ನಾಡಿಗೆ ಹೆಜ್ಜೆ ಹಾಕಿ ಪೊಲೀಸರ ನೇತೃತ್ವದಲ್ಲಿ ಎರಡು ಕಾರಿನಲ್ಲಿ ಬೆಂಗಳೂರು ಕಡೆ ಸುಮಾರು 11:30 ಕ್ಕೆ ಪ್ರಯಾಣ ಮಾಡಿದ್ದು ಸಂಜೆ 3 ಗಂಟೆಗೆ ಸಿಎಂ , ಗೃಹಸಚಿವರ ಮುಂದೆ ಹಾಜರಾಗಲಿದ್ದಾರೆ. ಬಳಿಕ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಪಡೆಯಲಿದ್ದಾರೆ.