ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಬಂದಿದ್ದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ದೇರಳಕಟ್ಟೆ ಕೀನ್ಯಾ ನಿವಾಸಿ ಆಸಿಫ್ ( 24), ಮುಕ್ಕ ಕಸ್ತೂರಿ ಮಿಲ್ ಬಳಿಯ ನಿವಾಸಿ ಅಸ್ಗರ್ ಅಲಿ (31), ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ ರಾಶಿಮ್ (24) ಬಂಧಿತರು. ಬೆಂಗಳೂರು ನಿವಾಸಿ ರೆಹ್ಮಾನ್ ಮತ್ತು ವಿದೇಶಿ ಪ್ರಜೆ ಅಲೆನ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಎಂಬಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಬಂದಿದ್ದರು ಎನ್ನಲಾಗಿದೆ.
ಬಂಧಿತರಿಂದ 7ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು, 1ಲಕ್ಷ ರೂ. ಮೌಲ್ಯದ ಮಾಧಕ ವಸ್ತು ಎಂಡಿಎಂಎ ಹಾಗೂ ಮೊಬೈಲ್ ಹಾಗೂ ನಗದು ಸೇರಿ ಒಟ್ಟು ಒಟ್ಟು 44ಸಾವಿರ ರೂ. ಮೌಲ್ಯದ ಸೊತ್ತು ಗಳು ಸೇರಿದಂತೆ ಒಟ್ಟು 8.44 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಆರೋಪಿಗಳ ಪೈಕಿ ಆಸಿಫ್, ಅಸ್ಗರ್ ಅಲಿ, ರಾಶಿಮ್ ನನ್ನು ವಶಕ್ಕೆ ಪಡೆದು ಕೊಂಡು ವಿಚಾರಿಸಿದಾಗ ತಪ್ಪು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ವಿದೇಶಿ ಪ್ರಜೆ ಅಲೆನ್ ಮತ್ತು ಬೆಂಗಳೂರು ನಿವಾಸಿ ರೆಹ್ಮಾನ್ ನ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಆರೋಪಿಗಳು ಮುಕ್ಕ ಮಾಲೆಮಾರ್ ನ ಅಗ್ರಜ ಕಟ್ಟಡದ ಬಳಿ ಕಾರೊಂದರಲ್ಲಿ ಬಂದು ಮಾಧಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕ ಶರಣಪ್ಪ ಭಂಡಾರಿ ಅವರಿಗೆ ಬಂದ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸರು ಖಾಸಗಿ ವಾಹನದಲ್ಲಿ ಬಂದು ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಉಪ ನಿರೀಕ್ಷಕ ಶರಣಪ್ಪ ಭಂಡಾರಿ ಅವರು ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.