ಮಂಗಳೂರು : ಫೈನಾನ್ಸ್ ಗೆ ಬುರ್ಖಾ ಧರಿಸಿಕೊಂಡು ಬಂದು ಮಹಿಳೆ ಮೇಲೆ ಆಸಿಡ್ ಎರಚಿ ಚಿನ್ನಾಭರಣ ಕಳ್ಳತನ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಬಜಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಜ್ಪೆ ಶಾಂತಿಗುಡ್ಡೆಯ ಪ್ರೀತೇಶ್ ಯಾನೆ ಪ್ರೀತು (31), ಸುರತ್ಕಲ್ ಕೋಡಿಕರೆಯ ಧನರಾಜ್ ಯಾನೆ ಧನು (30) ಹಾಗೂ ಬಾಳ ಕುಂಬಳಕೆರೆಯ ಕುಸುಮಾಕರ ಯಾನೆ ಅಣ್ಣು (37) ಬಂಧಿತ ಆರೋಪಿಗಳು
ಮಂಗಳೂರು ತಾಲೂಕು ಬಜಪೆ ಗ್ರಾಮದ ನಿವಾಸಿ ಲೆಸ್ಲಿ ಡಿ ಕುನ್ಹಾ ಅವರು ಬಜಪೆ ಪೇಟೆಯಲ್ಲಿರುವ ಬಜಪೆ ಫೈನಾನ್ಸ್ ಗೆ ಜು. 4.ರಂದು ಸಂಜೆ ಬುರ್ಖಾ ಧರಿಸಿ ಬಂದಿದ್ದ ಮೂವರು ಚಿನ್ನಾಭರಣ ಸುಲಿಗೆ ಮಾಡಲು ಪ್ರಯತ್ನಿಸಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇನ್ನು ಬಂಧಿತರಲ್ಲಿ ಪ್ರೀತೇಶ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಹಾಗೂ ಬಜಪೆ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ, ಧನರಾಜ್ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ 2 ಹಾಗೂ ಮೂಡಬಿದರೆ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಜೀವ ಬೆದರಿಕೆ ಪ್ರಕರಣ, ಕುಸುಮಾಕರನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಹಾಗೂ ಬಜಪೆ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣಗಳು ದಾಖಲಾಗಿದೆ. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಇನೋವಾ ಕಾರು, ಸ್ವಿಫ್ಟ್ ಕಾರು ಮತ್ತು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.