ಮಂಗಳೂರು: ಕರಾವಳಿಯಲ್ಲಿ ನಡೆಯುವ ಅವ್ಯಾಹತ ದಂಧೆಯ ಪಾಲಿಗೆ ಈಗ ಮಣ್ಣುಗಾರಿಕೆಯೂ ಸೇರ್ಪಡೆಗೊಂಡಿದೆ. ಮರಳುಗಾರಿಕೆಯ ಜೊತೆಗೆ ಮಣ್ಣು ದಂಧೆಯೂ ಭಾರೀ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಬೆಟ್ಟ- ಗುಡ್ಡಗಳನ್ನು ಅಗೆದು ಮಣ್ಣನ್ನು ಹೊರ ರಾಜ್ಯಗಳಿಗೆ ರವಾನೆ ಮಾಡಲಾಗುತ್ತಿದೆ.
ಮರಳು ಮಾಫಿಯಾಕ್ಕೆ ಹೆಸರುವಾಸಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಣ್ಣು ದಂಧೆ ಆರಂಭಗೊಂಡಿದೆ. ಕೃಷಿ ಭೂಮಿ, ಕುಮ್ಕಿ ಜಮೀನು ಹೀಗೆ ಎಲ್ಲೆಂದರಲ್ಲಿ ಮಣ್ಣು ಅಗೆದು ಸಾಗಾಟ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹಲವೆಡೆ ಇಂತಹ ಮಣ್ಣು ಸಾಗಾಟದ ಪ್ರಕ್ರಿಯೆ ಹೆಚ್ಚಾಗುತ್ತಿದ್ದು, ಆಂಧ್ರಪ್ರದೇಶದಲ್ಲಿ ಇಲ್ಲಿನ ಮಣ್ಣಿಗೆ ಬೇಡಿಕೆ ಇರುವ ಹಿನ್ನಲೆಯಲ್ಲಿ ಮಣ್ಣಿನ ವಹಿವಾಟು ಹೆಚ್ಚಾಗಲಾರಂಭಿಸಿದೆ. ಇದೇ ರೀತಿ ಶಾಸಕರೋರ್ವರ ಜಮೀನಿನಲ್ಲಿ ನಡೆಸಲಾಗುತ್ತಿರುವ ಮಣ್ಣಿನ ವ್ಯಾಪಾರ ಸ್ಥಳೀಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇಂಥಹುದೇ ಒಂದು ಮಣ್ಣಿನ ವ್ಯವಹಾರ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ರವರ ಮಾಲೀಕತ್ವದ ಜಮೀನಿನಲ್ಲೂ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆಕಲ್ಲು ಎಂಬಲ್ಲಿ ಸುಮಾರು 39 ಎಕರೆ ಜಮೀನು ಬಿ.ಎಂ. ಫಾರೂಕ್ಗೆ ಸೇರಿದ್ದು, ಇದರಲ್ಲಿ 5 ಎಕರೆ ಜಾಗದಲ್ಲಿ ಮಣ್ಣು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಈ ಕಾರಣಕ್ಕಾಗಿ ಕಳೆದ ಕೆಲವು ತಿಂಗಳಿನಿಂದ ಇಲ್ಲಿ ಮಣ್ಣು ಅಗೆಯುವ ಕಾರ್ಯ ಆರಂಭಗೊಂಡು, ಮಣ್ಣು ಆಂಧ್ರಪ್ರದೇಶಕ್ಕೂ ಸಾಗಿಸಲಾಗುತ್ತಿದೆ. ಆದರೆ ಈ ಮಣ್ಣು ಸಾಗಾಟದ ಲಾರಿಗಳಿಂದಾಗಿ ಸ್ಥಳೀಯ ಜನರು ಪ್ರಾಣಭಯದಿಂದ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಈ ಮಣ್ಣು ಆಂಧ್ರಪ್ರದೇಶಕ್ಕೆ ರವಾನೆಯಗುತ್ತಿದೆ. ಸಿಮೆಂಟ್ ಉತ್ಪಾದನೆಗೆ ಈ ಮಣ್ಣು ಪೂರಕವಾದ ಹಿನ್ನಲೆಯಲ್ಲಿ ನಿಗದಿತ ಪರ್ಮೀಟ್ಗಿಂತ ಹೆಚ್ಚು ಲೋಡ್ ಮಣ್ಣು ಸಾಗಾಟವಾಗುತ್ತಿದೆ ಅನ್ನುವುದು ಸ್ಥಳೀಯರ ಆರೋಪವಾಗಿದೆ. ಇದೇ ರೀತಿಯ ಪ್ರಕ್ರಿಯೆ ನಡೆದಲ್ಲಿ ಬಳ್ಳಾರಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಣ್ಣಿನ ಗಣಿಗಾರಿಕೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.