ಪುತ್ತೂರು; ವ್ಯಕ್ತಿಯೊಬ್ಬರು ಪತ್ನಿಯ ಕೊಲೆಯಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದು ಸ್ಥಳಕ್ಕೆ ಹೋದ ಪೊಲೀಸರು ಬೆಚ್ಚಿ ಬಿದ್ದ ಘಟನೆ ಪುತ್ತೂರಿನ ಬೆಳಿಯೂರುಕಟ್ಟೆ ಸಮೀಪ ನಡೆದಿದೆ.
ಪುತ್ತೂರಿನ ಬೆಳಿಯೂರುಕಟ್ಟೆ ಸಮೀಪ ವ್ಯಕ್ತಿಯೊಬ್ಬರು ಪುತ್ತೂರು ಗ್ರಾಮಾಂತರ ಠಾಣೆಗೆ ಬಂದು ನನ್ನ ಪತ್ನಿಯನ್ನು ಮಗನೇ ಕೊಂದಿದ್ದಾನೆ ಎಂದು ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಠಾಣೆಯಿಂದ ಹೊರಡುವಾಗ ದಾರಿ ಮಧ್ಯೆ ಕೊಲೆ ನಡೆದಿದೆ ಎಂಬ ಮನೆಯ ಅಕ್ಕಪಕ್ಕದವರಿಗೂ ಪೊಲೀಸರು ಕರೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಹೋಗಿ ಪೊಲೀಸರು ಮನೆ ಬಾಗಿಲು ತಟ್ಟಿದಾಗ ಕೊಲೆಯಾಗಿದ್ದಾರೆ ಎಂದು ಹೇಳಲಾದ ಮಹಿಳೆಯೇ ಬಾಗಿಲು ತೆರೆದಿದ್ದಾರೆ. ಪೊಲೀಸರಿಗೆ ಏನೆಂದು ತೋಚದೆ, ಏನಿದು? ಎಂದು ಕೇಳಿದಾಗ ಅಲ್ಲಿದ್ದ ಎಲ್ಲರ ಮುಖದಲ್ಲಿ ಗೊಂದಲ ಕಾಣಿಸಿದೆ. ಪೊಲೀಸರು ಮನೆಗೆ ಬಂದದ್ದನ್ನು ನೋಡಿ ದೂರು ನೀಡಿದ ವ್ಯಕ್ತಿಯ ಪುತ್ರ ಬಂದು ಎಲ್ಲರ ಗೊಂದಲವನ್ನು ನಿವಾರಣೆ ಮಾಡಿದ್ದಾರೆ.
ದೂರು ನೀಡಿದ ವ್ಯಕ್ತಿ ಕಳೆದ ಹಲವು ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಸೋಮವಾರ ರಾತ್ರಿ ಮಲಗಿದವರಿಗೆ ಮಗ ತಾಯಿಯನ್ನು ಕೊಂದ ಹಾಗೆ ಕನಸು ಬಿದ್ದಿದೆಯಂತೆ. ಬೆಳಿಗ್ಗೆ ಎದ್ದ ಮೇಲೆ ಕೂಡಾ ಅದನ್ನು ನಿಜ ಎಂದು ನಂಬಿ ಭಯಗೊಂಡು, ಇದೇ ಭಯದಲ್ಲಿ ಬೆಳಗ್ಗೆ ಎದ್ದ ಬಳಿಕ ಮನೆಯಲ್ಲಿ ಪತ್ನಿ ಇದ್ದಾಳೆ ಎಂದು ಗಮಿಸಲು ಹೋಗದೇ, ಪಕ್ಕದ ಮನೆಯವರ ಬಳಿ ಓಡಿಹೋಗಿ ʼ ಮಗ ತಾಯಿಯನ್ನು ಕೊಂದʼ ಎಂದು ಹೇಳಿದ್ದಾರೆ. ಗಾಬರಿಗೊಂಡ ನೆರೆಮನೆಯವರು ಆ ವ್ಯಕ್ತಿಯನ್ನು ಸಂಪ್ಯ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಕನಸು ಕಂಡು ಅದನ್ನು ನಿಜ ಎಂದು ಭಾವಿಸಿ ಹೀಗೆ ಮಾಡಿದ್ದಾರೆ ಎಂದು ಪೊಲೀಸರಲ್ಲಿ ಮಗ ಹೇಳಿದ್ದಾರೆ. ಸದ್ಯಕ್ಕೆ ಈ ಸುದ್ದಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.