ಭಾರತ ದೇಶವು ಭವಿಷ್ಯದಲ್ಲಿ ಹಲವು ಮಹಾ ಚಂಡಮಾರುತಗಳನ್ನು ಎದುರಿಸಬೇಕಾಗಬಹುದು ಎಂದು ಲಂಡನ್ನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಮಾನವ ನಿರ್ಮಿತ ಅವಾಂತರಗಳೇ ಇದಕ್ಕೆ ಕಾರಣ ಎಂದು ತಜ್ಞರ ಸಂಶೋಧನಾ ವರದಿ ಬಹಿರಂಗಪಡಿಸಿದೆ.
ಬ್ರಿಟನ್ನ ಬ್ರಿಸ್ಟಾಲ್ ವಿವಿ ತಜ್ಞರು ಈ ಸಂಶೋಧನೆ ನಡೆಸಿದ್ದು, 2020ರಲ್ಲಿ ಭಾರತಕ್ಕೆ ಅಪ್ಪಳಿಸಿದ ಸೂಪರ್ ಸೈಕ್ಲೋನ್ ಆಂಫನ್ ಮಾದರಿಯಲ್ಲಿ ಹಲವು ಮಹಾ ಚಂಡಮಾರುತಗಳು ಭಾರತ ದೇಶ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು ಕಾಡಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ವಾತಾವರಣಕ್ಕೆ ಬಿಡುಗಡೆ ಅಗುತ್ತಿರುವ ಹಸಿರು ಮನೆ ಅನಿಲಗಳ ಪ್ರಮಾಣ ಇದೇ ರೀತಿಯಲ್ಲಿ ಮುಂದುವರೆದರೆ, ಭಾರತದ ಬಹಳಷ್ಟು ಜನತೆ ಪ್ರವಾಹದಿಂದ ಬಾಧಿತರಾಗಬೇಕಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. 2020ರಲ್ಲಿ ಸಂಭವಿಸಿದ ರೀತಿಯಲ್ಲೇ 1 ಮೀಟರ್ಗೂ ಹೆಚ್ಚು ಎತ್ತರದ ಪ್ರವಾಹ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.
ಜಾಗತಿಕವಾಗಿ ದಕ್ಷಿಣ ಏಷ್ಯಾ ಪ್ರಾಂತ್ಯವು ಹವಾಮಾನ ಸೂಕ್ಷ್ಮ ವಲಯವಾಗಿದ್ದು, ಇಲ್ಲಿ ಸೂಪರ್ ಸೈಕ್ಲೋನ್ ಸಂಭವಿಸಿದರೆ, ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶವಾದ ಕಾರಣ ಸಾವಿರಾರು ಜನರ ಸಾವು – ನೋವು ಕೂಡಾ ಸಂಭವಿಸಬಹುದಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.