ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಬಂಟ್ವಾಳ ಗಡಿಪ್ರದೇಶವಾದ ತೆಂಕಕಜೆಕಾರು ಗ್ರಾಮದ ಕರ್ಲ ನಿವಾಸಿ ರಫೀಕ್(20ವ.) ಎಂಬವರನ್ನು ಕಕ್ಯೆಪದವು ಕೊಡ್ಯಮಲೆ ಗುಡ್ಡೆಯಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳಗಿನ ಕರ್ಲ ಮನೆ ನಿವಾಸಿ ಸಿದ್ದೀಕ್ ಎಂಬಾತನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಏಕೆ ನಡೆಯಿತು?
ಕೊಲೆ ಆರೋಪಿ ಸಿದ್ದೀಕ್ ರೊಂದಿಗೆ ಮೃತ ರಫೀಕ್ ಎಂಬವನು ಹಲವು ಬಾರಿ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಆರೋಪಿ ಸಿದ್ದೀಕ್ ರಫೀಕ್ನಿಗೆ ಬುದ್ದಿ ಕಲಿಸಬೇಕೆಂದು ಹಲವು ಸಮಯದಿಂದ ಕಾಯುತ್ತಿದ್ದನೆನ್ನಲಾಗಿದೆ.
ಅಂತೆಯೆ ರವಿವಾರ ಸಂಜೆ 6 ಗಂಟೆಯ ವೇಳೆಗೆ ಸಂಬಂಧಿಯೇ ಆಗಿರುವ ಸಿದ್ದೀಕ್ನ ಮನೆಯ ಮುಂಭಾಗ ಶಟ್ಲ್ ಬ್ಯಾಡ್ಮಿಂಟನ್ ಆಟ ಆಡುತ್ತಿದ್ದ ಸಮಯ ರಫೀಕ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಲ್ಲಿನ ಸಮೀಪದ ಗುಡ್ಡ ಪ್ರದೇಶಕ್ಕೆ ಸಿಗರೇಟು ಸೇದುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಆತನಲ್ಲಿ ಮಾತಾನಾಡುತ್ತಾ ಸಿದ್ದೀಕ್ ತಾನು ತಂದಿದ್ದ ಚಾಕುವಿನಿಂದ ರಫೀಕ್ ಅವರ ಕುತ್ತಿಗೆಗೆ, ಎದೆಗೆ ಮತ್ತು ಹೊಟ್ಟೆಗೆ ತಿವಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ರಸ್ರಾವವಾಗಿ ಬಿದ್ದವನನ್ನು ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಮುಖಕ್ಕೆ ಜಜ್ಜಿ ಕೊಲೆಮಾಡಲಾಗಿದೆ. ರಫೀಕ್ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಸಿದ್ದೀಕ್ ಮೃತದೇಹವನ್ನು ಅಲ್ಲಿಯೇ ಬಿಟ್ಟರೆ ತೊಂದರೆಯಾಗಬಹುದೆಂದು ಅಲ್ಲಿಂದ ತನ್ನ ಗೆಳೆಯ ಪಯಾಝ್ ಎಂಬವರಿಗೆ ಕರೆ ಮಾಡಿ ಆತನ ಮನೆಗೆ ಹೋಗಿ ಕಾರು ಪಡೆದುಕೊಂಡು, ವಾಹನದಲ್ಲಿ ಮೃತದೇಹವನ್ನು ಇಟ್ಟುಕೊಂಡು ವಗ್ಗ ಕಡೆ ಬರುತ್ತಾ ಕೊಡ್ಯಮಲೆ ಕಾಡುಪ್ರದೇಶದ ಮೋರಿಯಲ್ಲಿ ಹರಿಯುತ್ತಿರುವ ನೀರಿಗೆ ಬಿಸಾಡಿದ್ದ. ಅಲ್ಲಿಂದ ನೇರ ಮನೆಗೆ ಬಂದು ಕಾರಿನಲ್ಲಿದ್ದ ರಕ್ತದ ಕಲೆಗಳನ್ನು ನೀರಿನಿಂದ ತೊಳೆದು ಬಟ್ಟೆ ಬರೆಗಳನ್ನು ಬಕೆಟ್ ನೀರಿನಲ್ಲಿ ಹಾಕಿ ತೊಳೆದು ಪ್ರಕರಣದ ಸಾಕ್ಷ್ಯ ನಾಶ ಮಾಡಿದ್ದ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ.
ಕಾರು, ಸೊತ್ತುಗಳು ವಶಕ್ಕೆ;
ಆರೋಪಿಯು ಕೃತ್ಯಕ್ಕೆ ಬಳಸಿದ ಮಾರುತಿ ಆಲ್ಟೋ ಕಾರು, ಚಾಕು, ಕೃತ್ಯದ ವೇಳೆ ಆತ ತೊಟ್ಟಿದ್ದ ವಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.