ಮಂಗಳೂರು: ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ಡಿ 28 ಶನಿವಾರ ಹಾಗೂ 29 ಭಾನುವಾರದಂದು ‘ಕರಾವಳಿ ಉತ್ಸವ’ದ ಅಂಗವಾಗಿ ಬೀಚ್ ಉತ್ಸವವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಬೀಚ್ ಉತ್ಸವದ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ‘ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಇದೇ 28ರಂದು ಸಂಜೆ 6.30ಕ್ಕೆ ಬೀಚ್ ಉತ್ಸವವನ್ನು ಉದ್ಘಾಟಿಸುವರು. ಸಂಜೆ 7.30 ರಿಂದ ಸಂಗೀತ ನಿರ್ದೇಶಕ ಮಣಿಕಂಠ ಕದ್ರಿ ಹಾಗೂ 29ರಂದು ಸಂಜೆ 7.30ರಿಂದ ಗಾಯಕ ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ’ ಎಂದರು.
‘ಇದೇ ಬೆಳಿಗ್ಗೆ 5.30ರಿಂದ ಯೋಗ, ಬೆಳಿಗ್ಗೆ 6.30ರಿಂದ ಉದಯರಾಗ, ಬೆಳಿಗ್ಗೆ 9ರಿಂದ ಜಲ ಸಾಹಸ ಕ್ರೀಡೆಗಳು, 9.30ರಿಂದ ಮರಳು ಶಿಲ್ಪ ರಚನೆ ಸ್ಪರ್ಧೆ, ಸಂಜೆ 5.30ರಿಂದ ನೃತ್ಯ ಸ್ಪರ್ಧೆಗಳು ನಡೆಯಲಿವೆ. ಕರಾವಳಿ ಸ್ವಾದದ ಆಹಾರ ಮಳಿಗೆಗಳು ಬೀಚ್ ಉತ್ಸವದ ವಿಶೇಷ ಆಕರ್ಷಣೆ ಆಗಲಿವೆ. ನಾಡಿನ ಬೇರೆ ಬೇರೆ ಕಡೆಗಳಿಂದ ಕಡಲ ಕಿನಾರೆಗೆ ಬರುವ ಪ್ರವಾಸಿಗರು ವರ್ಷಾಂತ್ಯವನ್ನು ಖುಷಿಯಿಂದ ಕಳೆಯಲು ಈ ಉತ್ಸವ ಅವಕಾಶ ಕಲ್ಪಿಸಲಿದೆ’ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಾರ್ತಾಧಿಕಾರಿ ಖಾದರ್ ಷಾ, ಉತ್ಸವದ ಪ್ರಾಯೋಜಕರಾದ ಉದ್ಯಮಿ ರೋಹನ್ ಮೊಂತೆರೊ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ನೂರ್ ಜಹರಾ ಖಾನಂ ಅವರು ಭಾಗವಹಿಸಿದ್ದರು.