ನವದೆಹಲಿ: ಲೈಂಗಿಕ ಕಾರ್ಯಕರ್ತೆಯರನ್ನು ಪೊಲೀಸರು ಘನತೆಯಿಂದ ನಡೆಸಿಕೊಳ್ಳಬೇಕು. ದಾಳಿ ಅಥವಾ ವಿಚಾರಣೆ ವೇಳೆ ಅವಾಚ್ಯವಾಗಿ ನಿಂದಿಸಿ, ದೈಹಿಕ ಹಿಂಸೆ ನೀಡಬಾರದು ಎಂದು ಬುಧವಾರ ಸುಪ್ರೀಂಕೋರ್ಟ್ ಹೇಳಿದೆ.
ಈ ಕುರಿತು ನಿರ್ದೇಶನಗಳನ್ನು ನೀಡಿರುವ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ್ ರಾವ್, ಬಿ.ಆರ್.ಗವಾಯಿ ಮತ್ತು ಎಸ್.ಬೋಪಣ್ಣನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ಲೈಂಗಿಕ ಕಾರ್ಯಕರ್ತೆಯರ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅವರ ಫೋಟೊಗಳನ್ನು ಕ್ಲಿಕ್ಕಿಸಿ ಪ್ರಕಟಿಸುವುದು, ಗುರುತು ಬಹಿರಂಗಪಡಿಸುವುದು ಮಾಡಬಾರದು. ಸ್ವಯಂಪ್ರೇರಿತ ಲೈಂಗಿಕ ಕೆಲಸ ಕಾನೂನುಬಾಹಿರವಲ್ಲ ಮತ್ತು ವೇಶ್ಯಾಗೃಹವನ್ನು ನಡೆಸುವುದು ಕಾನೂನು ಬಾಹಿರವಾಗಿರುವುದರಿಂದ ವೇಶ್ಯಾಗೃಹಗಳ ಮೇಲಿನ ದಾಳಿಯಲ್ಲಿ ಲೈಂಗಿಕ ಕಾರ್ಯಕರ್ತರನ್ನು ಬಂಧಿಸಬಾರದು, ದಂಡ ವಿಧಿಸಬಾರದು, ಕಿರುಕುಳ ನೀಡಬಾರದು ಎಂದು ಪೀಠವು ಆದೇಶಿಸಿದೆ.
ಇದು ಮಾನವೀಯ ಘನತೆಗೆ ಭಾರಿ ಧಕ್ಕೆ ತರಲಿದೆ. ಈ ಸಂಬಂಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸೂಕ್ತಮಾರ್ಗಸೂಚಿ ಹೊರಡಿಸಬೇಕು. ಲೈಂಗಿಕ ಕಾರ್ಯಕರ್ತೆಯರ ಘನತೆ ರಕ್ಷಣೆ ಸಂಬಂಧ ಕೇಂದ್ರ ಸರ್ಕಾರ ಶೀಘ್ರದಲ್ಲೇ ಸೂಕ್ತ ಕಾಯ್ದೆ ಜಾರಿ ಮಾಡಬೇಕು ಎಂದು ಹೇಳಿದೆ.