ಸುದೀಪ್ ಅಭಿನಯದ ವಿಜಯ್ ಕಾರ್ತಿಕೇಯ ನಿರ್ದೇಶನದ ಹೊಸ ಚಿತ್ರ ‘K 47’ನ ಚಿತ್ರೀಕರಣ ಸೋಮವಾರದಿಂದ ಪ್ರಾರಂಭವಾಗಿದೆ.
ಈ ಸಂದರ್ಭದಲ್ಲಿ ಸುದೀಪ್, ಪ್ರಿಯಾ ಸುದೀಪ್, ವಿಜಯ್ ಕಾರ್ತಿಕೇಯ ಮುಂತಾದವರು ಹಾಜರಿದ್ದರು. ಇದು ಸುದೀಪ್ ಅಭಿನಯದ 47ನೇ ಚಿತ್ರವಾಗಿದ್ದು, ಸದ್ಯಕ್ಕೆ ‘ಕೆ-47’ ಎಂದು ಕರೆಯಲಾಗುತ್ತಿದ್ದು, ಚಿತ್ರತಂಡವು ಇನ್ನೂ ಕೂಡ ಸುದೀಪ್ ಅಭಿನಯ ಈ ಸಿನಿಮಾಕ್ಕೆ ಹೆಸರನ್ನು ಇಟ್ಟಿಲ್ಲ ಎನ್ನಲಾಗುತ್ತಿದೆ.
ಸಿನಿಮಾ ಕುರಿತು ಮಾತನಾಡಿರುವ ಸುದೀಪ್, ‘ಚಿತ್ರದ ಕಥೆಯ ಓಟಕ್ಕೆ ನಾಯಕಿ ಮತ್ತು ಆಕೆಯ ದೃಶ್ಯಗಳ ಅವಶ್ಯಕತೆ ಇಲ್ಲ ಎಂದನಿಸಿದ್ದರಿಂದ ಆ ಪಾತ್ರವನ್ನು ಕೈಬಿಟ್ಟಿದ್ದೇವೆ. ನಾಯಕಿ ಪಾತ್ರವನ್ನು ಸುಮ್ಮನೆ ತುರುಕಬಾರದು. ಚಿತ್ರದಲ್ಲಿ ನಾಯಕಿ ಇರಬೇಕೆಂದರೆ ಒಳ್ಳೆಯ ಪಾತ್ರ ಇರಬೇಕು. ಕೆಲವೊಮ್ಮೆ ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ, ನಾಯಕಿ ಪಾತ್ರವನ್ನು ಬಿಟ್ಟಿದ್ದೇವೆ’ ಎಂದು ತಿಳಿಸಿದ್ದಾರೆ.
ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಹಣವಿದೆ.