ಮಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಮೇಲಾಧಿಕಾರಿಗಳ ವಿರುದ್ಧ ದಬ್ಬಾಳಿಕೆ ದೂರುಗಳು ಸಾಮಾನ್ಯವಾಗಿ ಕೇಳಿ ಬರುತ್ತವೆ. ಅದರಲ್ಲೂ ಕೆಎಸ್ಆರ್ಟಿಸಿ ಇಲಾಖೆಯಲ್ಲಿ ಮೇಲಾಧಿಕಾರಿಗಳ ಕಿರುಕುಳ ಆರೋಪ ಹೊಸದೇನಲ್ಲ.
ಮಂಗಳೂರಿನ ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಈಗ ಮತ್ತೆ ಕೇಳಿ ಬಂದಿದೆ. ಸಾರಿಗೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಕಾರಣ ಮೇಲಧಿಕಾರಿಗಳ ಕಿರುಕುಳ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.
ಮಂಗಳೂರಿನ ಕೆಎಸ್ಆರ್ಟಿಸಿ ಅಧಿಕಾರಿಗಳ ವಿರುದ್ಧ ಮತ್ತೆ ಗಂಭೀರ ಆರೋಪ ಕೇಳಿಬಂದಿದೆ. ಮಂಗಳೂರು ಹೊರವಲಯದ ಕುಂಟಿಕಾನ ಎಂಬಲ್ಲಿ ಸಾರಿಗೆ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ಮೂರನೇ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಸ್ಆರ್ಟಿಸಿ ಚಾಲಕ ಕಂ ನಿರ್ವಾಹಕ ನಿಂಗಪ್ಪ ಸೋಮವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದವರಾದ ನಿಂಗಪ್ಪ ಡ್ರೈವರ್ ಕಂ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ 6 ತಿಂಗಳ ಹಿಂದೆ ಕರ್ತವ್ಯಲೋಪದ ಅಡಿಯಲ್ಲಿ ಅವರನ್ನು ಅಮಾನತ್ತು ಮಾಡಲಾಗಿತ್ತು. ಮನೆಯವರಿಗೆ ಕರೆ ಮಾಡಿ ಮೇಲಾಧಿಕಾರಿಗಳು ಕ್ಷುಲ್ಲಕ ಕಾರಣಕ್ಕಾಗಿ ಸಸ್ಪೆಂಡ್ ಮಾಡಿದ್ದಾರೆ ಎಂದು ತಿಳಿಸಿದ್ದರು.
“ಡಿಪೋದಲ್ಲಿ ಬಸ್ನ್ನು ಹಿಂದೆ ತೆಗೆಯುವ ವಿಚಾರದಲ್ಲಿ ಮಾತಿಗೆ ಮಾತಾಗಿತ್ತು. ಈ ದ್ವೇಷದ ಹಿನ್ನಲೆಯಲ್ಲಿ ಇಲ್ಲಸಲ್ಲದ ಆರೋಪ ಹೊರಿಸಿ ಸಸ್ಪೆಂಡ್ ಮಾಡಿದ್ದಾರೆ ಎಂದು ಮನೆಯವರಿಗೆ ಹೇಳಿದ್ದು, ಇನ್ನು ಇದೇ ಕಾರಣಕ್ಕೆ ತುಂಬಾ ಬೇಸರದಲ್ಲಿದ್ದರು. 6 ತಿಂಗಳಾದರೂ ಸಸ್ಪೆಂಡ್ ವಾಪಸ್ ಪಡೆಯದ ಕಾರಣ ಹಣಕಾಸಿನ ಸಮಸ್ಯೆಯಾಗಿತ್ತು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,” ಎಂದು ಮನೆಯವರು ಮತ್ತು ಸಂಬಂಧಿಕರು ಆರೋಪಿಸಿದ್ದಾರೆ.