ಶಿವಮೊಗ್ಗ: ಜಿಲ್ಲೆಗೆ ಪ್ರವೇಶಿಸದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಹೇರಲಾಗಿದ್ದು, ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಿಂದ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ.
ಮುತಾಲಿಕ್ ಅವರು ಹಾನಿಗೊಳಗಾದವರಿಗೆ ಸಾಂತ್ವನ ಹೇಳಲು ರಾಗಿಗುಡ್ಡ ಬಡಾವಣೆ ಭೇಟಿಗೆ ಮುಂದಾಗಿದ್ದರು. ಆದರೆ ಈ ಸಂದರ್ಭದಲ್ಲಿ ಅವರನ್ನು ತಡೆದು ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅವರಿಗೆ ಶಿವಮೊಗ್ಗ ಪ್ರವೇಶ ಮಾಡದಂತೆ ನಿಷೇಧ ಹೇರಬೇಕು ಎಂದು ಪೊಲೀಸ್ ಅಧೀಕ್ಷಕರು ಜಿಲ್ಲಾಡಳಿತಕ್ಕೆ ಕೋರಿದ್ದರು. ಇದರಂತೆಯೇ ಪೊಲೀಸ್ ಅಧೀಕ್ಷಕರ ಮನವಿಯನ್ನು ಪರಿಗಣಿಸಿ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗರೆಡ್ಡಿ ಆದೇಶ ಹೊರಡಿಸಿದ್ದು, ಅಕ್ಟೋಬರ್ 18ರಿಂದ ಮುಂದಿನ 30ದಿನಗಳವರೆಗೆ ಜಿಲ್ಲೆಯನ್ನು ಪ್ರವೇಶ ಮಾಡದಂತೆ ಸೂಚಿಸಿದ್ದಾರೆ.
ಸದ್ಯ ಶಿವಮೊಗ್ಗ ನಗರ ಸೇರಿದಂತೆ, ರಾಗಿಗುಡ್ಡದಲ್ಲಿ ಶಾಂತಿ ನೆಲೆಸಿದ್ದು, ಮುತಾಲಿಕ್ ಭಾಷಣದಿಂದ ಶಾಂತಿ ಕದಡುವ ಸಾಧ್ಯತೆ ಇರುವುದರಿಂದ, ಶಿವಮೊಗ್ಗ ಜಿಲ್ಲೆಗೆ ಇಂದಿನಿಂದ ಅಂದರೆ, ಸೆ.18ರಿಂದ ಮುಂದಿನ 30ದಿನ ಪ್ರವೇಶ ಮಾಡಬಾರದೆಂದು ರಾತ್ರೋರಾತ್ರಿ ನೋಟಿಸ್ ಜಾರಿ ಮಾಡಿದೆ.