ಪುತ್ತೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ಉಂಟಾದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೋಮ ಹವನದ ಮೊರೆ ಹೋಗಿದ್ದಾರೆ.
ಪುತ್ತೂರು ಸಮೀಪದ ಸವಣೂರು ಗ್ರಾಮದಲ್ಲಿರುವ ಅವರ ಕುಂಜಾಡಿ ಮನೆಯಲ್ಲಿ ವಿಶೇಷ ಹೋಮ ಮಾಡಲಾಗುತ್ತಿದೆ. ಜೂ.11ರಂದು ಆರಂಭವಾಗಿರುವ ಈ ಹೋಮ ಜೂ.18ರವರೆಗೆ ನಡೆಯಲಿದೆ. ವಿದ್ವಾನ್ ಬಾಲಕೃಷ್ಣ ಕಾರಂತ್ ನೇತೃತ್ವದಲ್ಲಿ ವಿಶೇಷ ಹೋಮ ಹವನ ನಡೆಯುತ್ತಿದ್ದು, ಯಾರನ್ನೂ ಕರೆದಿಲ್ಲ. ಮನೆಯ ಪ್ರವೇಶ ದ್ವಾರಗಳನ್ನು ಬಂದ ಮಾಡಿಸಿರುವ ನಳಿನ್ ಕುಮಾರ್ ಕಟೀಲ್, ಮನೆ ಕಡೆ ಯಾರೂ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ.
ಸದ್ಯ 9 ದಿನಗಳ ಹೋಮ ಹವನದ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿದೆ. ಮತ್ತೊಂದೆಡೆ ರಾಜಕೀಯ ಉದ್ದೇಶದಿಂದ ಹೋಮ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.
ಈ ಬಾರಿ ಅವರಿಗೆ ಲೋಕಸಭೆ ಟಿಕೆಟ್ ನೀಡಬಾರದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದೆಲ್ಲದರ ನಡುವೆ ಹೋಮ ಮಾಡಲಾಗುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಸ್ಥಾನಕ್ಕೆ ಯಾವುದೇ ಕುತ್ತು ಬಾರದಿಲಿ ಮತ್ತು ಲೋಕಸಭೆ ಟಿಕೆಟ್ ಕೈ ತಪ್ಪದಿರಲಿ ಎಂಬ ಕಾರಣಕ್ಕಾಗಿ ಗೌಪ್ಯವಾಗಿ ಹೋಮ ಹವನ ಮಾಡುತ್ತಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.ಅಲ್ಲದೇ ರಾಜಯೋಗಕ್ಕಾಗಿ ಇದೆಲ್ಲವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.