ಬೆಳ್ತಂಗಡಿ : “ಮೂಲ ಸೌಕರ್ಯಗಳಿಂದ ವಂಚಿತರಾದ ವೃದ್ಧೆ, ಏಕಾಂಗಿಯಾಗಿ ಬದುಕು ಸಾಗಿಸುತ್ತಿರುವ ಡೀಕಮ್ಮ ಅಜ್ಜಿ” ಎಂಬ ಶೀರ್ಷಿಕೆ ಅಡಿಯಲ್ಲಿ ನಿಮ್ಮ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಹಾಗೂ ಯೂಟ್ಯೂಬ್ ನಲ್ಲಿ ಬೆಳಗ್ಗೆ ವರದಿ ಭಿತ್ತರವಾದ ಬೆನ್ನಲ್ಲೇ ಮಧ್ಯಾಹ್ನ ಅಧಿಕಾರಿಗಳ ಭೇಟಿ ನೀಡಿ ಅಜ್ಜಿಗೆ ಆಧಾರ್, ಪಾನ್ ಸೇರಿದಂತೆ ಉಳಿದ ದಾಖಲೆಗಳನ್ನು ಮಾಡಿ ಕೊಡುವುದಾಗಿ ಅಳದಂಗಡಿ ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿ ವಿಜೇತ್.ಬಿ ಮತ್ತು ಗ್ರಾ.ಪಂ ಸದಸ್ಯ ಪ್ರವೀಣ್ ಭರವಸೆ ನೀಡಿದರು. ಅದರ ಬೆನ್ನಲ್ಲೇ ಸಂಜೆ ಅಧಿಕಾರಿಗಳು ಅಜ್ಜಿಯ ಮನೆಯ ಮುಂದೆ ಸೋಲಾರ್ ಲೈಟ್ ಅಳವಡಿಸಿದ್ದಾರೆ. ಅದಲ್ಲದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು ಮಹಾಎಕ್ಸ್ ಪ್ರೆಸ್ ವರದಿ ನೋಡಿ ಅಜ್ಜಿಗೆ ಸಹಾಯ ಮಾಡುತ್ತಿರುವ ಸ್ಥಳೀಯ ನಿವಾಸಿ ಸಂತೋಷ್ ಗೆ ಜೂ.26 ರಂದು ರಾತ್ರಿ ಕರೆ ಮಾಡಿ ಡೀಕಮ್ಮ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ನಾಳೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರನ್ನು ಸ್ಥಳಕ್ಕೆ ಕಳುಹಿಸಿ ವರದಿ ನೀಡಲು ಸೂಚಿಸಿದ್ದಾರೆ. ಅಲ್ಲದೇ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಸಂತೋಷ್ ಮಹಾಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.
ಮಹಾ ಎಕ್ಸ್ ಪ್ರೆಸ್ ವರದಿಯಿಂದ ಒಂದೇ ದಿನದಲ್ಲಿ ಡೀಕಮ್ಮ ಅಜ್ಜಿಯ ಬಗ್ಗೆ ಕಾಳಜಿವಹಿಸಿ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಭರವಸೆಯ ಮಾತುಗಳನ್ನು ಹೇಳಿದ್ದು ಅಲ್ಲದೆ ಸಂಜೆ ವೇಳೆಗೆ ಸೋಲಾರ್ ಲೈಟ್ ಅಳವಡಿಸಲು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ , ಅಳದಂಗಡಿ ಪಿಡಿಒ ಪೂರ್ಣಿಮಾ ಅವರು ಸೂಚಿಸಿದ ಮೇರೆಗೆ ಸ್ಥಳೀಯ ನಿವಾಸಿ ಸಂತೋಷ್ ತಂಡ ರಸ್ತೆಯಲ್ಲಿದ್ದ ಸೋಲಾರ್ ಲೈಟ್ ತೆಗೆದು ತಾತ್ಕಾಲಿಕವಾಗಿ ಅಜ್ಜಿಯ ಮನೆಯ ಹೊರಗಡೆ ಅಳವಡಿಸಿದ್ದು ಅಜ್ಜಿಗೆ ಸಂತೋಷ ಉಂಟು ಮಾಡಿದೆ.