ಕಾರವಾರ: ಚುನಾವಣೆಯಲ್ಲಿ ಒಂದು ರೂಪಾಯಿ ಕೂಡಾ ಖರ್ಚು ಮಾಡದೇ ಗೆದ್ದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಸ್ತೆ ಬದಿಯಲ್ಲಿ ಚಹಾ ಕುಡಿಯುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪ್ತವಾಸದಲ್ಲಿರುವ ಸಚಿವ ಕೋಟ ಇಂದು ಬೆಳಗ್ಗೆ ಕುಮಟಾ ಟೋಲ್ ಗೇಟ್ ಬಳಿ ಕಾರ್ಯಕರ್ತರ ಅಂಗಡಿಯಲ್ಲಿ ಚಹಾ ಸೇವಿಸಿದ್ದಾರೆ.
ಪ್ರವಾಸದ ವೇಳೆ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಸಣ್ಣ ಚಹಾ ಅಂಗಡಿಗೆ ತೆರಳಿ ಚಹಾ ಕುಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆಪ್ತರ ಜೊತೆ ಕೆಲ ಕಾಲ ಹರಟಿದರು. ಈ ವೇಳೆ ಸಚಿವರ ಜೊತೆ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯ್ಕ್ ಕೂಡಾ ಉಪಸ್ಥಿತರಿದ್ದರು. ಸಂಪುಟ ದರ್ಜೆ ಸಚಿವರಾಗಿದ್ದರೂ ಬೆಂಗಳೂರಿನಲ್ಲಿ ಈವರೆಗೆ ಸರ್ಕಾರಿ ಬಂಗಲೆ ಪಡೆಯದೇ ಶಾಸಕರ ಭವನದ ಕೊಠಡಿಯಲ್ಲೇ ವಾಸ್ತವ್ಯ ಇರುವುದು ಸಚಿವರ ಸರಳತೆಗೆ ಮತ್ತೊಂದು ಸಾಕ್ಷಿಯಾಗಿದೆ.