ಬೆಳ್ತಂಗಡಿ : ಸುಮಾರು ಒಂಬತ್ತು ತಿಂಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಕೊಲೆಯಾದ ಯುವಕ ಶರತ್ ಶವವನ್ನು ಇನೋವಾ ಕಾರಿನಲ್ಲಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಎಸೆಯಲಾಗಿದೆ ಎಂದು ಆರೋಪಿಗಳು ತಿಳಿಸಿದ್ದು ಅದರಂತೆ ಬೆಂಗಳೂರು ಕಬ್ಬನ್ ಪಾರ್ಕ್ ಎಸಿಪಿ ರಾಜೇಂದ್ರ ನೇತೃತ್ವದಲ್ಲಿ ಶವ ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಿದ್ದು ಮೂರು ದಿನಗಳ ಕಾರ್ಯಾಚರಣೆಯಲ್ಲಿ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ. ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದರು. ಆದ್ರೆ ಇಬ್ಬರು ಪ್ರಮುಖ ಆರೋಪಿಗಳನ್ನು ಜ.9 ರಂದು ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಶವ ಪತ್ತೆ ಕಾರ್ಯಾಚರಣೆ ಸ್ಥಗಿತ: ಪ್ರಕರಣ ಸಂಬಂಧಿಸಿದಂತೆ 8 ಆರೋಪಿಗಳನ್ನು ಈ ಮೊದಲೇ ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಉಳಿದ ಇಬ್ಬರು ಆರೋಪಿಗಳಾದ ಶರತ್ ಮತ್ತು ಧನುಷ್ ಅವರ ಪೊಲೀಸ್ ಕಸ್ಟಡಿ ಜ.6 ರಂದು ಅಂತ್ಯವಾಗಿದ್ದ ಕಾರಣ ಮೂರು ದಿನ ಶವ ಪತ್ತೆ ಕಾರ್ಯಾಚರಣೆ ನಡೆಸಿದ್ದ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರು ಜ.5 ರಂದು ಸಂಜೆ ಕಾರ್ಯಾಚರಣೆ ಸ್ಥಗಿತಗೊಳಿಸಿ ಬೆಂಗಳೂರಿಗೆ ಇಬ್ಬರು ಆರೋಪಿಗಳಾದ ಎ-1 ಶರತ್ ಮತ್ತು ಎ-2 ಧನುಷ್ ರನ್ನು ಕರೆದುಕೊಂಡು ಹೋಗಿಗ್ದರು. ಬಳಿಕ ಜ.6 ರಂದು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದರು. ಆಗ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಎರಡು ದಿನ ಅಂದರೆ ಜ.9 ವರೆಗೆ ನೀಡಿತ್ತು. ಇದರಿಂದ ಎರಡು ದಿನದಲ್ಲಿ ಚಾರ್ಮಾಡಿ ಘಾಟ್ ಶವ ಪತ್ತೆ ಕಾರ್ಯಾಚರಣೆ ನಡೆಸಲು ಕಷ್ಟವಾಗಿದ್ದರಿಂದ ಚಾರ್ಮಾಡಿ ಘಾಟ್ ಶವಪತ್ತೆ ಕಾರ್ಯಾಚರಣೆ ಸ್ಥಗಿತ ಮಾಡಿದ್ದು ಜ.9 ರಂದು ಆರೋಪಿಗಳಾದ ಶರತ್ ಮತ್ತು ಧನುಷ್ ನನ್ನು ಬೆಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳ ಮೇಲೆ ಚಾರ್ಜ್ ಶೀಟ್ ಮಾಡಲು ಹಲವು ಸಾಕ್ಷಿ ಲಭ್ಯ: ಇನ್ನೂ ಕೊಲೆಯಾದ ಶರತ್ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಅಕ್ಟ್ರಾಸಿಟಿ ಅಡಿಯಲ್ಲಿ ಕಿಡ್ನಾಪ್ ,ಹಲ್ಲೆ , ಕೊಲೆ ಸೇರಿದಂತೆ ಸುಮೋಟೋ ಪ್ರಕರಣ ದಾಖಲಿಸಿದ್ದು ಶವ ಪತ್ತೆಯಾಗದಿದ್ದರೂ ಕಿಡ್ನಾಪ್ , ಹಲ್ಲೆ ,ಕೊಲೆ ಮಾಡಿರುವುದಕ್ಕೆ ಹಲವು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿದ್ದು ಇದರಿಂದ ಆರೋಪಿಗಳ ಮೇಲೆ ಮೂರು ತಿಂಗಳ ಒಳಗೆ ಚಾರ್ಜ್ ಶೀಟ್ ಮಾಡಲು ಯಾವುದೇ ತೊಂದರೆ ಇಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿದೆ.