ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಸದ್ಯಕ್ಕೆ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ 36ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಶಿಕ್ಷಣ ಸಚಿವರು ಮಂಗಳವಾರ ವೆಬಿನಾರ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಸಚಿವರು, ಕರೊನಾ ಸೋಂಕು ಹೆಚ್ಚುತ್ತಿರುವ ಸಮಯದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರದ ಮುಂದಿಲ್ಲ ಎಂದರು.
ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಬೇಕು ಎಂಬ ಕಾರಣಕ್ಕೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಮತ್ತು ಶಾಲಾ ಚಟುವಟಿಕೆ ಪ್ರಾರಂಭಿಸಲು ಸರ್ಕಾರ ಆಲೋಚಿಸುತ್ತಿದೆ. ವಠಾರ ಶಾಲೆ, ಪಡಶಾಲೆ ಶಾಲೆ, ಮನೆಶಾಲೆ, ತಂತ್ರಜ್ಞಾನ ಬಳಕೆ ಮಾಡಿಕೊಂಡು ಆಕಾಶವಾಣಿ, ಚಂದನ ದೂರದರ್ಶನ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿ ಲಭ್ಯ ಆಗಬಹುದಾದ ಎಲ್ಲ ಅವಕಾಶಗಳನ್ನೂ ಮುಕ್ತವಾಗಿರಿಸಿಕೊಂಡು ಮಕ್ಕಳ ಹಿತದೃಷ್ಟಿಯಿಂದ ಯಾವ ಮಾದರಿ ಉತ್ತಮ ಎಂದು ಆಲೋಚಿಸುತ್ತಿದೆ ಎಂದು ಸಚಿವ ಸುರೇಶ್ಕುಮಾರ್ ತಿಳಿಸಿದರು.
ಯೂ ಟ್ಯೂಬ್, ವಾಟ್ಸಾಪ್ ಮೂಲಕ ಬೋಧನೆ, ಶಾಲೆಗಳ ಗ್ರಂಥಾಲಯದಲ್ಲಿ ಪುಸ್ತಕ ಪಡೆದು ಒಂದು ದಿನ ಓದಿ ಮತ್ತೊಂದು ದಿನ ಒಪ್ಪಿಸುವುದು, ಸಿಲೆಬಸ್ ಪಾಠವೇ ಬೋಧನೆ ಮಾಡಬೇಕೆಂದಿಲ್ಲ, ಸ್ವಯಂ ಸೇವಕರನ್ನು ಬಳಸಿಕೊಂಡು ಗುಂಪು ಆಧಾರಿತ ಶಿಕ್ಷಣ ನೀಡುವುದು, ಮಾಡುವ ಬೋಧನೆ ತಲುಪುತ್ತಿದೆಯೇ ಎಂದು ನಿರ್ವಹಣೆ ಮಾಡಬೇಕು ಎಂಬುತ್ಯಾದಿ ವಿಚಾರಗಳು ಸಂವಾದಲ್ಲಿ ಪ್ರಸ್ತಾಪವಾದವು.
ಶಿಕ್ಷಣ ಕ್ಷೇತ್ರದಲ್ಲಿ ತೊಡಗಿರುವ ಎನ್ಜಿಒಗಳಾದ ಆಜೀಂ ಪ್ರೇಮ್ಜಿ ಪ್ರತಿಷ್ಠಾನ, ಗ್ರಾಮ್ಸ್, ಆಕ್ಷರ ಫೌಂಡೇಷನ್, ಯೂನಿಸೆಫ್, ಸಿಇಇ, ಪೋರ್ತ್ ಫೌಂಡೇಷನ್, ಅಗತ್ಯ ಸೇರಿ 36ಕ್ಕೂ ಹೆಚ್ಚಿನ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಿಕ್ಷಣ ತಜ್ಞರಾದ ಎಂ.ಕೆ.ಶ್ರೀಧರ್, ಡಾ.ಗುರುರಾಜ ಕರಜಗಿ, ಡಾ.ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಆಯುಕ್ತ ಡಾ.ಕೆ.ಜಿ .ಜಗದೀಶ್ ಇತರರು ಭಾಗವಹಿಸಿದ್ದರು.