ಮಂಗಳೂರು : ಕಡಲನಗರಿಯಲ್ಲಿ ಅಪರೂಪ ಶಸ್ತ್ರ ಚಿಕಿತ್ಸೆಯೊಂದನ್ನು ಪಶು ವೈದ್ಯರೊಬ್ಬರು ಯಶಸ್ವಿವಾಗಿ ಮಾಡಿ ಮುಗಿಸಿದ್ದಾರೆ.
ಸಯಾಮಿ ಅವಳಿ ಬೆಕ್ಕುಗಳನ್ನು ಪಶುವೈದ್ಯರೋಬ್ಬರು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ನಗರದ ಅಡ್ಯಾರ್ನಲ್ಲಿರುವ ಪಶು ಚಿಕಿತ್ಸಾಲಯದಲ್ಲಿ ಈ ಅಪರೂಪದ ಶಸ್ತ್ರ ಚಿಕಿತ್ಸೆ ನಡೆದಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ನಿವಾಸಿಯೊಬ್ಬರು ಸಾಕಿದ ಪರ್ಷಿಯನ್ ತಳಿಯ ಬೆಕ್ಕೊಂದು 5 ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅದರಲ್ಲಿ 4 ಬೆಕ್ಕಿನ ಮರಿಗಳು ವಿಶಿಷ್ಟ ಸಯಾಮಿ ಅವಳಿಗಳಾಗಿ ಜನಿಸಿದ್ದವು. ಬೆಕ್ಕನ್ನು ಪರೀಕ್ಷಿಸಿದ ಅಡ್ಯಾರ್ನ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕೆ.ಪ್ರಮೋದ್ ಅವರು, ಇವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲು ನಿರ್ಧರಿಸಿದ್ದಾರೆ. ಈ ಸಯಾಮಿ ಬೆಕ್ಕುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬೇರ್ಪಡಿಸಿ, ಮಾಲೀಕರಿಗೆ ನೀಡಿದ್ದಾರೆ.
ಇದಕ್ಕೂ ಮೊದಲು ಬೆಕ್ಕು ಸಾಕಿದ ವ್ಯಕ್ತಿ ವಿವಿಧ ಪಶು ಚಿಕಿತ್ಸಾಲಯಕ್ಕೆ ಹೋದರೂ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ಇಲ್ಲವೆಂದು ಹೇಳಿದ್ದರು ಎಂದು ಬೆಕ್ಕಿನ ಮಾಲೀಕರು ಹೇಳಿದ್ದಾರೆ. ಇದೀಗ ವೈದ್ಯರ ಶಸ್ತ್ರಚಿಕಿತ್ಸೆಯಿಂದಾಗಿ ಅವರು ಸಂತಸಗೊಂಡಿದ್ದಾರೆ. ಬೆಕ್ಕಿನ ಮರಿಗಳಿಗೂ ಪುರ್ನಜನ್ಮ ಸಿಕ್ಕಂತಾಗಿದೆ.