ಹರಿಯಾಣ: ಭ್ರಾತೃತ್ವ ಭಾವದ ದ್ಯೋತಕವೆನಿಸಿರುವ ರಕ್ಷಾಬಂಧನ ಹಬ್ಬ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲೇ ಸಹೋದರ – ಸಹೋದರಿಯರು ಅಂಗಾಂಗಗಳನ್ನು ದಾನ ಮಾಡಿ ತಮ್ಮ ಅಮೂಲ್ಯ ಸಹೋದರ, ಸಹೋದರಿ ಯರಿಗೆ ಜೀವದಾನ ಮಾಡಿದ ಎರಡು ಅಪರೂಪದ ಘಟನೆಗಳು ಜರಗಿವೆ.
ಹರಿಯಾಣದ ರೋಹ್ಟಕ್ನಲ್ಲಿ 31 ವರ್ಷದ ಮಹಿಳೆ ಐದು ವರ್ಷಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷಿಸಿದ್ದರಿಂದ ಆಕೆಯ ಮೂತ್ರಪಿಂಡಗಳಿಗೆ ಹಾನಿಯುಂಟಾಯಿತು. ಇದರಿಂದ ದೀರ್ಘಕಾಲದವರೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಆಕೆಯ ಜೀವಕ್ಕೆ ಅಪಾಯವಿರುವುದಾಗಿ ವೈದ್ಯರು ಹೇಳಿದ್ದರು. ಆಕೆಗಿನ್ನು ಚಿಕ್ಕ ವಯಸ್ಸಾಗಿರುವುದರಿಂದ ಮೂತ್ರಪಿಂಡದ ಕಸಿ ಮಾಡುವಂತೆ ವೈದ್ಯರು ಸೂಚಿಸಿದ್ದರು.
ಮೊದಲಿಗೆ ಮಹಿಳೆಯ ಪತಿ ಮೂತ್ರಪಿಂಡ ದಾನಕ್ಕೆ ಮುಂದೆ ಬಂದರಾದರೂ ರಕ್ತದ ಗುಂಪು ಬೇರೆ ಬೇರೆ ಇರುವುದರಿಂದ ಸಾಧ್ಯವಾಗಿಲ್ಲ. ಆದರೆ ಮಹಿಳೆ ಹಾಗೂ ಸಹೋದರನ ರಕ್ತದ ಗುಂಪು ಒಂದೇ ಆಗಿತ್ತು. ಹೀಗಾಗಿ ಅಕ್ಕನನ್ನು ಉಳಿಸಲು ತನ್ನ ಒಂದು ಕಿಡ್ನಿಯನ್ನು ಸೋದರ ದಾನ ಮಾಡಿದ್ದಾನೆ. ವೈದ್ಯರು ಮೂತ್ರಪಿಂಡದ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಸಹೋದರಿಯ ಜೀವ ಉಳಿಸಿದ್ದಕ್ಕೆ ತಮ್ಮ ಹರ್ಷ ವ್ಯಕ್ತಪಡಿಸಿದ್ದಾನೆ. “ಸಹೋದರಿ ತನಗೆ ತುಂಬಾ ಅಮೂಲ್ಯವಾದವಳು. ಆಕೆ ಇಂದಿನಿಂದ ಸಂತಸದ ಜೀವನ ನಡೆಸುತ್ತಿರುವುದು ಬಹಳ ಸಂತಸ ತಂದಿದೆ” ಎಂದಿದ್ದಾನೆ.