ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಾಗುತ್ತಿದ್ದು ಮಳೆಗೆ ಸಾಕಷ್ಟು ಸಂಚಾರ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೋಹಪಾತ್ರ ಜು.9 ರಂದು ಮಂಗಳವಾರ ಭೇಟಿ ನೀಡಿ ರಸ್ತೆ ಸ್ಥಿತಿ ವೀಕ್ಷಣೆ ನಡೆಸಿದರು.

ಉಜಿರೆ, ಕಾಶಿಬೆಟ್ಟು ಮುಂಡಾಜೆ ಮೊದಲಾದ ಕಡೆ ರಸ್ತೆಯ ಪರಿಸ್ಥಿತಿ ವೀಕ್ಷಿಸಿದ ಅವರು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಮುಂದಿನ ಮೂರು ದಿನಗಳಲ್ಲಿ ರಸ್ತೆಯನ್ನು ಸಂಚಾರ ಯೋಗ್ಯ ಮಾಡಿಕೊಡುವಂತೆ ತಿಳಿಸಿದರು. ರಸ್ತೆಯುದ್ದಕ್ಕೂ ಅಲ್ಲಲ್ಲಿ ನಿಂತಿರುವ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ, ನಡೆದಾಡಲು ಸಾಧ್ಯವಾಗದ ಕಡೆಗಳಲ್ಲಿ ಕೆಸರು ತೆರವುಗೊಳಿಸಿ ಜಲ್ಲಿ ಹಾಕುವಂತೆ, ಅಪಾಯಕಾರಿ ಮರಗಳ ತೆರವು, ರಸ್ತೆ ಬದಿ ಇರುವ ವಿದ್ಯುತ್ ಕಂಬಗಳ ಸ್ಥಳಾಂತರ, ಮುಚ್ಚಿ ಹೋಗಿರುವ ಮೋರಿಗಳ ಮಣ್ಣು ತೆರವುಗೊಳಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಹೇಳಿದರು.

ಅವ್ಯವಸ್ಥಿತ ಕಾಮಗಾರಿ ಬಗ್ಗೆ ಗುತ್ತಿಗೆದಾರ ಕಂಪೆನಿಯ ಸಿಬ್ಬಂದಿಗೆ ಎಚ್ಚರಿಕೆ ನೀಡಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಿ, ಅಗೆದುಹಾಗಲಾದ ಸ್ಥಳಗಳಲ್ಲಿ ಜಲ್ಲಿ ಹಾಕಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದರು.

ಕಳೆದ ಹತ್ತು ದಿನಗಳಿಂದ ಈ ರಸ್ತೆಯು ಮಳೆಗೆ ಅತ್ಯಂತ ಕೆಟ್ಟು ಹೋಗಿದ್ದರು ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಳ್ಳದ ಕುರಿತು, ಹಾಗೂ ಸಾಕಷ್ಟು ದ್ವಿಚಕ್ರ ವಾಹನ ಸವಾರರು ಉರುಳಿ ಬೀಳುತ್ತಿರುವ ಕುರಿತು ಸ್ಥಳೀಯರು ಗಮನಕ್ಕೆ ಎಸಿಯವರ ತಂದರು.
ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಆರ್.ಐ ಪ್ರತೀಶ್, ಮುಂಡಾಜೆ ವಿ.ಎ ರಣಿತಾ, ಮುಂಡಾಜೆ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.