ಮಂಗಳೂರು: ನಗರದ ಬೋಳೂರು-ಮಠದಕಣಿಯ ಕೆನರಾ ಬ್ಯಾಂಕ್ ಕಟ್ಟಡದ ಎಟಿಎಂನ ಬಾಗಿಲಿಗೆ ಕಲ್ಲೆಸೆದು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಠದಕಣಿ ರಸ್ತೆಯ ನಿವಾಸಿ ಮನೀಶ್ (20) ಎಂಬಾತನಿಗೆ ಮಂಗಳೂರಿನ 6ನೇ ಜೆಎಂಎಫ್ಸಿ ಶಿಕ್ಷೆ ವಿಧಿಸಿದೆ.
2020ರ ಜು.9ರಂದು ಬೆಳಗ್ಗೆ ಆರೋಪಿಯು ಕಲ್ಲು ಎಸೆದು ಹಾನಿಗೊಳಿಸಿ 3,540 ರೂ.ನಷ್ಟವನ್ನುಂಟು ಮಾಡಿದ್ದ ಬಗ್ಗೆ ಬರ್ಕೆ ಪೊಲೀಸ್ ಎಸ್ಸೈ ಹಾರುನ್ ಅಖ್ತರ್ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಪೂಜಾಶ್ರೀ ಎಚ್.ಎಸ್. ಅವರು ಆರೋಪಿ ಮನೀಶ್ ತಪ್ಪಿತಸ್ಥನೆಂದು ನಿರ್ಣಯಿಸಿ ಭಾ.ದಂ.ಸಂ. ಕಲಂ 427ರ ಅಡಿಯಲ್ಲಿ ಅಪರಾಧಕ್ಕಾಗಿ 3,500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 10 ದಿನಗಳ ಸಾಮಾನ್ಯ ಸೆರೆಮನೆ ವಾಸ, ಕಲಂ 2(ಎ) ಕೆಪಿಡಿಎಲ್ಪಿ ಕಾಯಿದೆಯಡಿಯ ಅಪರಾಧಕ್ಕಾಗಿ 8 ತಿಂಗಳು ಸಾಮಾನ್ಯ ಸಜೆ ಮತ್ತು 2,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 10 ದಿನಗಳ ಸಾಮಾನ್ಯ ಸೆರೆಮನೆ ವಾಸ ವಿಧಿಸಿ ಆದೇಶಿಸಿದ್ದಾರೆ.