ವಿಟ್ಲ: ವಿಟ್ಲ-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ ಆಟೋ ರಿಕ್ಷಾ, ಟೂರಿಸ್ಟ್ ಕಾರು, ಖಾಸಗಿ ಬಸ್, ಲಾರಿ ಮಾಲಕರ ಸಂಘದ ವತಿಯಿಂದ ರಸ್ತೆ ತಡೆದು ನ.26ರ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ರಾಜ್ಯ ಸರಕಾರದ ವಿರುದ್ಧ ಘೋಷಣೆ ಹಾಕಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದ ಪ್ರತಿಭಟನಕಾರರು, ಸ್ಥಳಕ್ಕಾಗಮಿಸಿದ ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ತಮ್ಮ ಅಳಲನ್ನು ತೋಡಿಕೊಂಡು ಕೂಡಲೇ ರಸ್ತೆ ಹೊಂಡವನ್ನು ಮುಚ್ಚುವಂತೆ ವಿನಂತಿಸಿದರು. ಅಷ್ಟೇಅಲ್ಲದೆ 3 ದಿನದೊಳಗೆ ರಸ್ತೆ ಹೊಂಡವನ್ನು ಮುಚ್ಚದಿದ್ದಲ್ಲಿ ವಿಟ್ಲ ನಾಲ್ಕು ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಕುರಿತಂತೆ ಅಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿ, ಕೂಡಲೇ ಹೊಂಡ ಮುಚ್ಚುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಸ್ತೆ ತಡೆದು ಪ್ರತಿಭಟನೆ ಮಾಡಿದ ಪರಿಣಾಮ ಸುಮಾರು ಅರ್ಧ ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಿಟ್ಲ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರತಿಭಟನೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು, ಬಸ್ ಮಾಲಕ ಅರುಣ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ಲಾರಿ ಮಾಲಕ ಚಾಲಕ ಸಂಘದ ಅಧ್ಯಕ್ಷ ರಮೇಶ್ ವರಪ್ಪಾದೆ, ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವಸಂತ ಎನ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಉದಯಕುಮಾರ್ ಆಲಂಗಾರು, ಪ್ರಮುಖರಾದ ಕೃಷ್ಣಯ್ಯ ಕೆ.ವಿಟ್ಲ, ಬಿಜೆಪಿ ಪಕ್ಷದ ಪ್ರಮುಖರಾದ ಮೋಹನದಾಸ್ ಉಕ್ಕುಡ, ನರಸಪ್ಪ ಪೂಜಾರಿ, ಸದಾನಂದ ಗೌಡ ಸೇರಾಜೆ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್, ಜಯಂತ್, ವಸಂತ, ರಿಕ್ಷ ಮಾಲಕರಾದ ವೆಂಕಪ್ಪ ನಾಯ್ಕ್, ಭಾಸ್ಕರ, ಲಾರಿ ಮಾಲಕರಾದ ಜಯಪ್ರಕಾಶ್, ಹರೀಶ್ ಉಮಾಮಹೇಶ್ವರ, ನಾಗೇಶ್ ಬಸವನಗುಡಿ ಸೇರಿದಂತೆ ನೂರಾರು ನಾಗರಿಕರು ಉಪಸ್ಥಿತರಿದ್ದರು.