ಬೆಳ್ತಂಗಡಿ: ಕೊರೋನಾ ವೈರಸ್ ನ ರಣಕೇಕೆಗೆ ದೇಶದ ಜನಜೀವನವೇ ಸಂಕಷ್ಟದಲ್ಲಿ ಸಿಲುಕಿದೆ. ಒಂದೆಡೆ ಜನತೆ ಕೊರೋನಾ ಸೋಂಕಿಗೆ ತುತ್ತಾಗಿ ನಲುಗುತ್ತಿದ್ದರೆ ಮತ್ತೊಂದೆಡೆ ಹಸಿವು ಅದೆಷ್ಟೋ ಕುಟುಂಬಗಳನ್ನು ಕಿತ್ತು ತಿನ್ನುತ್ತಿದೆ. ಇದರಿಂದ ಕರಾವಳಿ ಜಿಲ್ಲೆಯ ಖಾಸಗಿ ಬಸ್ ಚಾಲಕ-ನಿರ್ವಾಹಕರ ಕುಟುಂಬಗಳು ಹೊರತಾಗಿಲ್ಲ.
ಯಾವುದೇ ವೃತ್ತಿ ಭದ್ರತೆ ಇಲ್ಲದೆ ಸಾವಿರಾರು ಮಂದಿ ಜಿಲ್ಲೆಯ ಖಾಸಗಿ ಬಸ್ ಗಳಲ್ಲಿ ಡ್ರೈವರ್, ಕಂಡೆಕ್ಟರ್ ಮತ್ತು ಕ್ಲೀನರ್ ಆಗಿ ಉದ್ಯೋಗ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್ ಡೌನ್ ನೀತಿಸಂಹಿತೆ ಜಾರಿಯಾದ ನಂತರ ಸರಿಯಾದ ಕೆಲಸವಿಲ್ಲದೇ, ಕುಟುಂಬ ನಿರ್ವಹಣೆಗೆ ಸಮರ್ಪಕ ಹಣವಿಲ್ಲದೆ ಇವರ ಗೋಳು ಯಾರಿಗೂ ಬೇಡದಂತಾಗಿದೆ.
ಆದರೆ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯದ ಟ್ಯಾಕ್ಸಿ, ಕ್ಯಾಬ್ ಮತ್ತು ಆಟೋ ಚಾಲಕರಿಗೆ 5,000 ರೂ ಸಹಾಯ ಧನವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಚುನಾವಣಾ ರ್ಯಾಲಿ, ರಾಜಕೀಯ ಸಮಾವೇಶದ ಸಮಯದಲ್ಲಿ ಎಲ್ಲ ಪಕ್ಷದ ಕಾರ್ಯಕರ್ತರನ್ನು ಹೊತ್ತು ತಿರುಗುತ್ತಿದ್ದ ಖಾಸಗಿ ಬಸ್ ಸಿಬ್ಬಂದಿಗಳ ಕಷ್ಟವನ್ನು ಆಲಿಸಲು ಯಾವುದೇ ಜನಪ್ರತಿನಿಧಿ ಮುಂದೆ ಬರದೇ ಇರುವುದು ದುರದೃಷ್ಟಕರ.
ಇನ್ನಾದರೂ ಕರಾವಳಿ ಮತ್ತು ಮಲೆನಾಡಿನ ಸಂಚಾರದ ಕೊಂಡಿಯಾಗಿರುವ ಖಾಸಗಿ ಬಸ್ ಸಿಬ್ಬಂದಿಗಳ ಲಾಕ್ ಡೌನ್ ಸಂಕಷ್ಟಗಳನ್ನು ಜನಪ್ರತಿನಿಧಿಗಳು ಮನಗಂಡು ಆದಷ್ಟು ಬೇಗ ಈ ಬಡಜೀವಿಗಳ ಬದುಕಲ್ಲಿ ನಗುವಿನ ಬೆಳಕು ನೀಡಬೇಕೆನ್ನುವುದೇ ನಮ್ಮ ಆಶಯ.