ಉಪ್ಪಿನಂಗಡಿ: ಸ್ಕೂಲ್ ಡೇ ನೋಡಲು ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆದೊಯ್ಯುವ ಭರವಸೆ ನೀಡಿ ಅತ್ಯಾಚಾರವೆಸಗಿದ ಪ್ರಕರಣ ನೆಲ್ಯಾಡಿ ಗ್ರಾಮದ ಪುಚ್ಚೇರಿ ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಡಿ 29ರಂದು ಶಾಲಾ ವಾರ್ಷಿ ಕೋತ್ಸವದ ಅಂಗವಾಗಿ ಹೆತ್ತವರು ಹಾಗೂ ಅಜ್ಜ, ತಂಗಿಯ ಜತೆ ಶಾಲೆಗೆ ಹೋಗಿದ್ದ ಬಾಲಕಿ ಕಾರ್ಯಕ್ರಮ ಪೂರ್ಣ ನೋಡಿ ಬರುವೆನೆಂದು ತಿಳಿಸಿದ ಕಾರಣಕ್ಕೆ ಹೆತ್ತವರು ಮನೆಯತ್ತ ಹೋಗಿದ್ದರು. ಇತ್ತ ಆಕೆಯ ಮನೆ ಸಮೀಪದ ನಿವಾಸಿ ಚೇತನ್ ಎಂಬಾತ ಶಾಲಾ ಕಾರ್ಯಕ್ರಮ ಮುಗಿದ ಬಳಿಕ ತಾನು ಮನೆಗೆ ಕರೆದೊಯ್ಯುವೆನೆಂದು ನಂಬಿಸಿ ಆಕೆಯನ್ನು ಬೈಕ್ನಲ್ಲಿ ಕುಳ್ಳಿರಿಸಿ ಮನೆಗೆ ಕರೆದೊಯ್ಯುವ ನೆಪದಲ್ಲಿ ಗುಡ್ಡವೊಂದಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಲ್ಲದೇ, ಬಳಿಕ ಆಕೆಯನ್ನು ಮದ್ಯ ರಾತ್ರಿ ಕಾಡಿನಲ್ಲೇ ಬಿಟ್ಟು ಹೋಗಿರುತ್ತಾನೆ. ಬಾಲಕಿ ಬಾರದೇ ಇದ್ದದ್ದನ್ನು ಗಮನಿಸಿದ ಹೆತ್ತವರು ಆಕೆಯನ್ನು ಹುಡುಕಿ ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ತಿಳಿಸಿದ್ದಾಳೆ.
ಅತ್ಯಾಚಾರಕ್ಕೀಡಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿ ನೀಡಿದ ದೂರಿನಂತೆ ಪೋಕ್ಸೋ ಪ್ರಕರಣ ದಾಖಲಿಸಿದ ಉಪ್ಪಿನಂಗಡಿ ಪೊಲೀಸರು ಶನಿವಾರದಂದು ಆರೋಪಿ ಚೇತನ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.