ಮಂಗಳೂರು: ಒಮಾನ್ ರಾಷ್ಟ್ರದಲ್ಲಿ ಶಾಹೀನ್ ಚಂಡಮಾರುತದಿಂದಾಗಿ ಮಂಗಳೂರಿನಿಂದ ಮಸ್ಕತ್ಗೆ ತೆರಳಬೇಕಾದ ವಿಮಾನ ಟೇಕಾಫ್ ಆಗದ ಕಾರಣ ಪ್ರಯಾಣಿಕರು ದಿನವೀಡೀ ವಿಮಾನ ನಿಲ್ದಾಣದಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು
ವಿಮಾನಯಾನ ಮಾಡಲು ಬಂದಿದ್ದ 100ಕ್ಕೂ ಹೆಚ್ಚು ಜನರು ವಿಮಾನ ನಿಲ್ದಾಣದಲ್ಲೇ ಕಾಯುವಂತಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ ಮಸ್ಕತ್ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಂಜೆಯವರೆಗೂ ಟೇಕಾಫ್ ಆಗಲಿಲ್ಲ.
ಸಂಜೆಯವರೆಗೂ ಏರ್ ಇಂಡಿಯಾ ವಿಮಾನ ಟೇಕಾಫ್ ಆಗುವುದಿಲ್ಲ ಎಂಬ ಮಾಹಿತಿಯನ್ನು ಸಿಬ್ಬದಿಗಳು ಪ್ರಯಾಣಿಕರಿಗೆ ನೀಡದ ಕಾರಣ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸಂಜೆಯ ವೇಳೆಗೆ ಮಸ್ಕತ್ಗೆ ತೆರಳಬೇಕಾಗಿದ್ದ ವಿಮಾನ ರದ್ದಾಗಿರುವ ಮಾಹಿತಿ ನೀಡಿದ್ದು, ಬೆಳಗ್ಗೆಯಿಂದ ಕಾದಿದ್ದ ಪ್ರಯಾಣಿಕರು ಮತ್ತೆ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು.
ಅಕ್ಟೋಬರ್ 7ರಂದು ರದ್ದಾಗಿರುವ ವಿಮಾನ ಮಸ್ಕತ್ಗೆ ಪ್ರಯಾಣ ಬೆಳೆಸಲಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಬೆಳಗ್ಗೆಯೇ ಅದನ್ನು ತಿಳಿಸಿದ್ದರೆ ಕಾಯುವುದು ತಪ್ಪುತ್ತಿತ್ತು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ, ಏರ್ ಪೋರ್ಟ್ ಒಳಭಾಗದಲ್ಲಿ ನೆಲದಲ್ಲೇ ಕುಳಿತು ಪ್ರಯಾಣಿಕರು ಏರ್ ಇಂಡಿಯಾ ನೀಡುವ ಆದೇಶಕ್ಕಾಗಿ ಕಾಯುವಂತಾಯಿತು. ಶಾಹೀನ್ ಚಂಡಮಾರುತದ ಪರಿಣಾಮದಿಂದ ಭಾರತದ ವಿವಿಧ ರಾಜ್ಯಗಳಲ್ಲಿ ಸಹ ಎರಡು ದಿನಗಳಿಂದ ಮಳೆಯಾಗುತ್ತಿದೆ.
ಈ ಬಗ್ಗೆ ಪ್ರಯಾಣಿಕ ಮಹಮ್ಮದ್ ಆಲಿ ಮಾತನಾಡಿ, ಬೆಳಗ್ಗಿನಿಂದ ಸಂಜೆಯವರೆಗೆ ಏರ್ ಪೋರ್ಟ್ ಒಳಗೆ ನೆಲದಲ್ಲಿ ಕೂತು ಕಾದಿದ್ದೇವೆ. ಒಮಾನ್ನಲ್ಲಿ ಚಂಡಮಾರುತ ಒಮ್ಮೆಲೇ ನಿರ್ಧಾರವಾಗಿದ್ದು ಅಲ್ಲ. ಏರ್ ಇಂಡಿಯಾಗೆ ಮೊದಲೇ ಮಾಹಿತಿಯಿದ್ದರೇ ಬೆಳಗ್ಗೆಯೇ ಮಾಹಿತಿ ನೀಡಬೇಕಾಗಿತ್ತು. ಆದರೆ ಸಂಜೆಯವರೆಗೂ ಕಾಯಿಸಿ, ಆ ಬಳಿಕ ಅಕ್ಟೋಬರ್ 7ರಂದು ಇದೇ ವಿಮಾನ ಮಸ್ಕತ್ಗೆ ಹೋಗೋದಾಗಿ ಹೇಳಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳೆಯರು ಮಕ್ಕಳು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.