ಪುತ್ತೂರು: ಪೆರ್ಲಂಪಾಡಿಯ ಕೊಳ್ತಿಗೆ ಗ್ರಾಮದ ಕುದ್ಕಳಿ ಎಂಬಲ್ಲಿ ಮನೆಯೊಂದರ ಗೋದಾಮಿನಲ್ಲಿ ಇರಿಸಿದ್ದ 10 ಚೀಲ ಕರಿಮೆಣಸನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳ್ಳಾರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುಳ್ಯ ತಾಲೂಕಿನ ಕಳಂಜಿ ಮನೆ ನಿವಾಸಿ ಮಂಜು, ಕೊಡಿಯಭೈಲು ಮನೆ ನಿವಾಸಿ ಪ್ರವೀಣ, ಜಾಲ್ಸೂರು ಗ್ರಾಮದ ಬರ್ಪೆಡ್ಕ ನಿವಾಸಿ ಪವನ್ ಕುಮಾರ್ ಹಾಗು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಬ್ದುಲ್ ಬಾಶೀತ್ ಬಂಧಿತ ಆರೋಪಿಗಳು
![](https://mahaxpress.com/wp-content/uploads/2022/07/Screenshot_20220705-193622_Samsung-Internet-300x246-1.jpg)
ಈ ಕೃತ್ಯದಲ್ಲಿ ಒಟ್ಟು ಐವರು ಭಾಗಿಯಾಗಿದ್ದು ಇನ್ನೊಬ್ಬ ಅಪ್ರಾಪ್ತ ಬಾಲಕ ಎನ್ನಲಾಗಿದೆ. ಕೊಳ್ತಿಗೆ ಗ್ರಾಮದ ಕುದ್ಕುಳಿಯ ಶಾಫಿ ಎಂಬವರ ಗೋದಾಮಿನಲ್ಲಿ ತುಂಬಿಸಿಡಲಾಗಿದ್ದ 1,18,750 ರೂ. ಮೌಲ್ಯದ 10 ಗೋಣಿ ಕರಿಮೆಣಸನ್ನು ಜೂ. 15ರಂದು ಕಳ್ಳತನಗೈಯಲಾಗಿತ್ತು. ಈ ಬಗ್ಗೆ ತೋಟ ನೋಡಿಕೊಳ್ಳುತ್ತಿದ್ದ ಆದಂ ಕುಂಞಿ ಎಂಬವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದರು.
ಇದರಂತೆ ತನಿಖೆ ವೇಳೆ ಬೆಳ್ಳಾರೆ ಠಾಣಾ ಉಪನಿರೀಕ್ಷಕರಿಗೆ ದೊರೆತ ಮಾಹಿತಿ ಅಧಾರದಲ್ಲಿ ಜುಲೈ 4 ರಂದು ಅಡ್ಕಾರ್ ನಲ್ಲಿ ಕಾರೊಂದನ್ನು ತಡೆದು ಮಂಜು ಎಂಬಾತನನ್ನು ವಶಕ್ಕೆ ಪಡೆದು, ಆತ ನೀಡಿದ ಮಾಹಿತಿಯಂತೆ ಆರೋಪಿ ಪವನ್ ಕುಮಾರ್ ಎಂಬಾತನ ಮನೆಯಲ್ಲಿ ಕಳವು ಮಾಡಿ ಬಚ್ಚಿಟ್ಟಿದ್ದ 10 ಗೋಣಿ ಕರಿಮೆಣಸನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ