ಮಣಿಪಾಲ: ಆರೋಗ್ಯ, ಶಿಕ್ಷಣ ಸಂಸ್ಥೆ ಕೈಗಾರಿಕೆ ಮೂಲಕ ಜಾಗತಿಕ ಗಮನ ಸೆಳೆದಿರುವ ಮಣಿಪಾಲದಲ್ಲಿ ಹಲವೆಡೆ ಕತ್ತಲೆ ಭಾಗ್ಯವಿದ್ದು ಕಳೆದ ಎರಡು ವರ್ಷಗಳಿಂದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಹೆದ್ದಾರಿ ಮತ್ತು ಜಂಕ್ಷನ್ ಒಳಭಾಗದಲ್ಲಿ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ.
ಮಕ್ಕಳು, ಮಹಿಳೆಯರು ಆತಂಕದಿಂದಲೆ ಸಂಚರಿಸಬೇಕಿದೆ. ಮುಖ್ಯವಾಗಿ ಮಣಿಪಾಲ ಜೂನಿಯರ್ ಕಾಲೇಜು, ಮಾಧವ ಕೃಪಾ ಶಾಲೆಯ ಜಂಕ್ಷನ್ ಮತ್ತು ಅಲೆವೂರು, ಇಂಡಸ್ಟ್ರಿಯಲ್ ಪ್ರದೇಶದ ಕಡೆಗೆ ಸಾಗುವ ರಸ್ತೆಯಲ್ಲಿ ಕೆಲವೆಡೆ ಬೀದಿ ದೀಪ ಬೆಳಗುತ್ತಿಲ್ಲ. ಆರ್ಎಸ್ಬಿ ಭವನದಲ್ಲಿರುವ ಹೈಮಾಸ್ಕ್ ದೀಪ ಮಾತ್ರ ಸ್ವಲ್ಪ ಮಟ್ಟಿಗೆ ಬೆಳಕು ನೀಡುತ್ತಿದೆ. ಅಂಚೆ ಕಚೇರಿ ಸಮೀಪ ಒಂದು ಮಾತ್ರ ಬೀದಿ ದೀಪವಿದ್ದು, ಅದು ಹೆಚ್ಚು ಪ್ರಕಾಶಮಾನವಾಗಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಎಂಜೆಸಿಯಿಂದ ಮಾಧವ ಕೃಪಾ ಮೂಲಕ ಹೆದ್ದಾರಿ ರಸ್ತೆಗೆ ಸಾಗುವ ಕಡೆಗೆ ಕತ್ತಲೆ ವಾತಾವರಣವಿದೆ. ಅಲ್ಲದೆ ಮಣಿಪಾಲದ ಅಂಚೆ ಕಚೇರಿ ಸಮೀಪದ ಬಸ್ ನಿಲ್ದಾಣ ಪರಿಸರದ ಜಂಕ್ಷನ್ ಸಹ ಕತ್ತಲೆಮಯವಾಗಿದೆ. ರಾತ್ರಿ 7ರ ಅನಂತರ ಕತ್ತಲೆಮಯದಿಂದ ಕೂಡಿರುವ ವಾತಾವರಣದಲ್ಲಿ ಮಹಿಳೆಯರು, ಮಕ್ಕಳು ಆತಂಕದಿಂದ ಓಡಾಡುವ ಪರಿಸ್ಥಿತಿ ಇದೆ. ರಾತ್ರಿ ಪಾಳಿ ಕೆಲಸಕ್ಕೆ ಹೋಗುವ, ಬರುವ ಮಹಿಳೆಯರು ಯುವತಿಯರು, ಕೋಚಿಂಗ್ ತೆರಳುವ ವಿದ್ಯಾರ್ಥಿಗಳಿಗೆ ಅಭದ್ರತೆ ಕಾಡುತ್ತಿದೆ. ಮಣಿಪಾಲ ಟೈಗರ್ ಸರ್ಕಲ್ನಿಂದ ಸಿಂಡಿಕೇಟ್ ಸರ್ಕಲ್ವರೆಗೂ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕಟ್ಟಡ ಮತ್ತು ವಾಹನಗಳ ಬೆಳಕೇ ಆಶ್ರಯ ಎನ್ನುತ್ತಾರೆ ಪಾದಚಾರಿಗಳು